Home ನಂಬಿಕೆ ಸುತ್ತಮುತ್ತ ನಾವು ದುಂಬಿಯಂತೆ ಚಲಿಸುತ್ತಲೇ ಇರಬೇಕು…ದುಂಬಿಯಿಂದ ಕಲಿಯೋದು ತುಂಬಾ ಇದೆ!

ನಾವು ದುಂಬಿಯಂತೆ ಚಲಿಸುತ್ತಲೇ ಇರಬೇಕು…ದುಂಬಿಯಿಂದ ಕಲಿಯೋದು ತುಂಬಾ ಇದೆ!

3505
0
SHARE

ಮುನಿಯಾದವನು ಹೇಗೆ ಬದುಕಬೇಕು? ಎಂದು ಕಲಿಸಿಕೊಡುವ ಶ್ರೀಮಧ್ಬಾಗವತವು ಇದಕ್ಕೆ ಗುರುವಾಗಿ ಭ್ರಮರ ಅಥವಾ ದುಂಬಿಯನ್ನು ಉದಾಹರಣೆಯನ್ನು ಹೇಳುತ್ತದೆ. ದುಂಬಿಯೊಂದು ಹೂವಿಂದ ಹೂವಿಗೆ ಹಾರುತ್ತ ಪರಾಗವನ್ನು ಗ್ರಹಿಸುವಂತೆ ಮುನಿಯಾದವನು ಮನೆಮನೆಯನ್ನು ಸುತ್ತಿ, ಅನೇಕ ಮನೆಗಳಿಂದ ಸ್ವಲ್ಪಸ್ವಲ್ಪವೇ ಅನ್ನವನ್ನು ಬೇಡಿ ಉಣ್ಣಬೇಕು. ಅದರಿಂದ ಶರೀರ ನಿರ್ವಾಹವೂ ನಡೆದು, ಯಾರಿಗೂ ಕೊಡಲು ಕಷ್ಟವಾಗುವುದಿಲ್ಲ. ಈ ಪ್ರಕಾರ ಮಧುಕರೀ ವೃತ್ತಿಯನ್ನು ಆಶ್ರಯಿಸಬೇಕು ಎಂದು ಶ್ರೀಮದ್ಭಾಗವತದಲ್ಲಿ ಹೇಳಲ್ಪಟ್ಟಿದೆ. ಇದು ಮುನಿಗಳಿಗೆ ಅನ್ವಯಿಸುವಂತೆ ಹೇಳಲ್ಪಟ್ಟಿದ್ದರೂ ಎಲ್ಲ ಮನುಕುಲಕ್ಕೆ ಆದರ್ಶಪ್ರಾಯವಾದ ಸಂಗತಿಯೇ ಆಗಿದೆ. ದುಂಬಿ ಪರಾಗವನ್ನು ಗ್ರಹಿಸುವಂತೆ ನಾವು ನಮ್ಮ ಆಹಾರವನ್ನು ಸೇವಿಸಬೇಕು ಎಂದರ್ಥ.

ಇದರ ಒಳಾರ್ಥ ಗಾಢವಾದುದು. ನಾವು ದುಂಬಿಯಂತೆ ಚಲಿಸುತ್ತಲೇ ಇರಬೇಕು. ಪ್ರಪಂಚದ ಎಲ್ಲಾ ಮೂಲೆಯನ್ನೂ ಸುತ್ತಬೇಕು. ಎಲ್ಲಾ ಕಡೆಗಳಿಂದಲೂ ಬೇಕಾದುದನ್ನು ಮಾತ್ರ ಹುಡುಕಿ ಗ್ರಹಿಸಬೇಕು ಮತ್ತು ಸ್ವೀಕರಿಸಬೇಕು. ಜೀವನ ಎಂಬುದೇ ಒಂದು ಚಲನೆ. ಈ ಚಲನೆಯಲ್ಲಿ ಮನುಷ್ಯ ಪರಾವಲಂಬಿ ಹಾಗಾಗಿ ಆತನು ದೀನನಾಗಿರಬೇಕು ಮತ್ತು ಎಲ್ಲರಲ್ಲಿಯೂ ಒಂದಾಗಿರಬೇಕು. ಬದುಕು ಯಾವತ್ತೂ ಚಲನೆಯಲ್ಲಿರಬೇಕು, ಉತ್ಸಾಹದಿಂದ ಇರಬೇಕು, ಸಣ್ಣಸಣ್ಣ ಸಂಗತಿಗಳಲ್ಲೇ ಸುಖವನ್ನು ಕಾಣಬೇಕು, ಆಹಾರವು ಹಸಿವನ್ನು ನೀಗಿಸಿ, ದೇಹಕ್ಕೆ ಶಕ್ತಿಯನ್ನು ನೀಡಬೇಕೇ ಹೊರತು ಆ ಆಹಾರವೇ ಜಡತ್ತ್ವವನ್ನು ತರುವಂತಿರಬಾರದು. ಹೀಗೆ ಹಲವಾರು ಗೂಡಾರ್ಥಗಳು ಈ ದುಂಬಿಯ ದೃಷ್ಟಾಂತದಲ್ಲಿ ಅಡಕವಾಗಿವೆ.

ದುಂಬಿಯು ಹೇಗೆ ಹೂವನ್ನು ಹುಡುಕಿಕೊಂಡು ಹೋಗಿ, ಆ ಹೂವುಗಳಿಂದ ಸಾರ-ರಸವನ್ನು ಗ್ರಹಿಸುವುದೋ ಅಂತೆಯೇ ಮನುಷ್ಯನು ಎಲ್ಲ ಹಿರಿಯ-ಕಿರಿಯ ಶಾಸ್ತ್ರಗಳಿಂದ ಸಾರವಾದ ಮಾತನ್ನು ತೆಗೆದುಕೊಳ್ಳಬೇಕು ಎನ್ನುತ್ತದೆ ಶ್ರೀಮದ್ಭಾಗವತ. ಜೀವನವೇ ಒಂದು ಕಲಿಕೆಯಾಗಿದ್ದರೂ ಜೀವನಕ್ಕೂ ಒಂದು ಕಲಿಕೆ ಇರಲೇಬೇಕು. ಆಗ ಮಾತ್ರ ಅದು ಸನ್ಮಾರ್ಗದ ಹಾದಿಯಲ್ಲಿ ಸಾಗುತ್ತದೆ. ಅಂತಹ ಸುಗಮವಾದ ಜೀವನಕ್ಕೆ ನಾವು ಕೇಳುವ, ಓದುವ, ನೋಡುವ ಶಾಸ್ತ್ರಗಳಲ್ಲಿ ಸೂತ್ರಗಳು ಅಡಕವಾಗಿವೆ. ಅಂತಹ ಸೂತ್ರಗಳನ್ನು ಸರಳವಾಗಿ ಗ್ರಹಿಸಿಕೊಂಡು ರೂಢಿಸಿಕೊಳ್ಳಬೇಕು. ಇದೂ ಒಂದು ಬಗೆಯ ಜೀವನ ಕೌಶಲ. ಜಗತ್ತಿನಲ್ಲಿ ಹಿರಿಯರಿಂದಲೂ ಕಿರಿಯರಿಂದಲೂ ಕಲಿಯಬೇಕಾದವುಗಳು ಸಾಕಷ್ಟಿವೆ. ಅವುಗಳಲ್ಲಿ ನಮಗೆ ಅಗತ್ಯವಾದುದನ್ನು ಕುಶಲಮತಿಯಿಂದ ತಿಳಿದುಕೊಂಡು, ಯಾವುದೇ ವಾದ-ವಿವಾದಕ್ಕೆ ಹೋಗದೆ ದೂರವೇ ಉಳಿಯಬೇಕು ಎನ್ನಲಾಗಿದೆ.

ದುಂಬಿಯನ್ನು ನಾವು ಅಷ್ಟೊಂದು ಸೂಕ್ಷ್ಮವಾಗಿ ಪರಿಶೀಲಿಸುವುದೇ ಇಲ್ಲ. ನೋಡಿದರೂ ಅದರ ಚಂದವನ್ನು ನೋಡಿ ಆ ಕ್ಷಣ ಆನಂದಪಟ್ಟುಕೊಂಡು ಅಲ್ಲಿಗೆ ಸುಮ್ಮನಾಗುತ್ತೇವೆ. ಆದರೆ ಆ ದುಂಬಿ ಮಕರಂದವನ್ನು ಹೀರುವಲ್ಲಿನ ತಾಳ್ಮೆ, ಉತ್ಸಾಹ, ಹೂವಿಗೆ ನೋವಾಗದಂತೆ ಸಾರವನ್ನು ಸೆಳೆದುಕೊಳ್ಳುವ ಬಗೆ ಎಲ್ಲವನ್ನೂ ಸೂಕ್ಷ್ಮವಾಗಿ ನೋಡಿದಾಗ ನಿಜವಾಗಿಯೂ ನಮಗೆ ದುಂಬಿ ಬದುಕಿಗೆ ಮಾದರಿ ಎಂಬ ಸತ್ಯ ಗೊತ್ತಾಗುತ್ತದೆ. ನಾವು ಕೂಡ ಈ ಸಮಾಜದಲ್ಲಿ ಸುವಿಚಾರಗಳನ್ನು ಸ್ವೀಕರಿಸುವ, ಪರರಿಗೆ ನೋವಾಗದಂತೆ ನಡೆದುಕೊಳ್ಳುವ, ಜೀವನೋತ್ಸಾಹವನ್ನು ಕಳೆದುಕೊಳ್ಳದೇ ಯಾವಾಗಳೂ ಹುಮ್ಮಸ್ಸಿನಿಂದ ಇರಲು ಈ ದುಂಬಿಯ ಬದುಕು ಮಾದರಿ!

..ಮುಂದುವರಿಯುವುದು.

||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||

-ಭಾಸ್ವ.

LEAVE A REPLY

Please enter your comment!
Please enter your name here