ಅಂಬಾರು : ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ಪೂರ್ವಭಾವಿಯಾಗಿ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ ಕಾರ್ಯಕ್ರಮವು ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ನಡೆಯಿತು.
ಪೂರ್ಣಕುಂಭದೊಡನೆ, ಚೆಂಡೆ, ಜಾಗಟೆ ವಾದನ ಸಹಿತ ಗ್ರಾಮಸ್ಥರು ರಥವನ್ನು ಸ್ವಾಗತಿಸಿದರು. ಮೊದಲಿಗೆ ಭಜನೆ, ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು. ನಂತರ ನಡೆದ ಸತ್ಸಂಗದಲ್ಲಿ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ಮುಂದಿನ ಫೆಬ್ರವರಿ 18ರಿಂದ 24ರ ವರೆಗೆ ನಡೆಯುವ ವಿಶ್ವಜಿತ್ ಅತಿರಾತ್ರ ಸೋಮಯಾಗದ ವಿಶೇಷತೆಗಳನ್ನು ವಿವರಿಸಿದರು.
ವಿಷ್ಣುಸಹಸ್ರನಾಮ ಅಭಿಯಾನದ ಜೊತೆ ಸಹಸ್ರ ವೃಕ್ಷ ಸಮೃದ್ಧಿಯ ಅಂಗವಾಗಿ ನೆಲ್ಲಿಗಿಡ ವಿತರಣೆ ಈಗಾಗಲೇ ನಡೆಯುತ್ತಿದ್ದು, ಇನ್ನೂ ಅನೇಕ ಕಾರ್ಯಕ್ರಮದ ಯೋಜನೆಯನ್ನು ಯಾಗ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರರಾದ ಕೊರಗಪ್ಪ ಶೆಟ್ಟಿ ಸಣ್ಣಹಿತ್ತಿಲು, ಮೊಕ್ತೇಸರ ಕೃಷ್ಣಪ್ಪ ಪೂಜಾರಿ ದೇರಂಬಳ ಮತ್ತು ಧಾರ್ಮಿಕ, ಸಾಮಾಜಿಕ ಮುಂದಾಳು ಡಾ| ಶ್ರೀಧರ ಭಟ್ ಉಪ್ಪಳ ಉಪಸ್ಥಿತರಿದ್ದರು. ವಿಷ್ಣು ಸಹಸ್ರನಾಮ ಅಭಿಯಾನ ಸಮಿತಿಯ ಅಧ್ಯಕ್ಷ ಹರೀಶ್ ಮಾಡ ಸ್ವಾಗತಿಸಿ ಅಂಬಾರು ಶ್ರೀ ಸದಾಶಿವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಆನಂದ ಬಿ.
ಚೆರುಗೋಳಿಯವರು ವಂದಿಸಿದರು.
ಜುಲೈ 13ರ ಶುಕ್ರವಾರ ಬೆಳಗ್ಗೆ 10.30ಕ್ಕೆ ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಜುಲೈ 14ರ ಶನಿವಾರ ಬೆಳಗ್ಗೆ 10 ಶಿರಿಯದ ಸೀರೆ ಶ್ರೀ ಶಂಕರನಾರಾಯಣ ದೇವಸ್ಥಾನಗಳಿಗೆ ಶ್ರೀ ವಿಷ್ಣು ಸಹಸ್ರನಾಮ ಅಭಿಯಾನ ರಥ ಪರ್ಯಟನೆ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದರು.