ವೇಣೂರು: ಅಜಿಲಸೀಮೆಗೆ ಒಳಪಟ್ಟ ಇತಿಹಾಸ ಪ್ರಸಿದ್ಧ ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರವಿವಾರ ಸಂಪನ್ನ ಗೊಂಡಿತು. ಬೆಳಗ್ಗೆ ಕವಾಟೋದ್ಘಾಟನೆ, ಚೂರ್ಣೋತ್ಸವ, ದೇವರ ಬಲಿ, ಮಧ್ಯಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ಎ. 20ರಂದು ದರ್ಶನ ಬಲಿ, ಕಲ್ಕುಡ-ಕಲ್ಲುರ್ಟಿ ದೈವಗಳ ನೇಮ ಜರಗಿತು.
ಬೆಳಗ್ಗೆ ಕಲ್ಲಡ್ಕ ವಿಟ್ಠಲ ನಾಯಕ್ ಮತ್ತು ಬಳಗದವರಿಂದ ಜರಗಿದ ಗೀತ-ಸಾಹಿತ್ಯ ಸಂಭ್ರಮ ವಿನೂತನ ಶೈಲಿಯ ಕಾರ್ಯಕ್ರಮವು ನೋಡುಗರ ಮನ ಸೆಳೆಯಿತು. ರವಿವಾರ ಸಂಜೆ ಬೆಳ್ತಂಗಡಿ ನೃತ್ಯ ನಿಕೇತನ ತಂಡದವರಿಂದ ಭರತ ನೃತ್ಯ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ರಾತ್ರಿ ಕೊಡಮಣಿತ್ತಾಯ ದೈವದ ಗಗ್ಗರ ಸೇವೆ ಬಳಿಕ ಮಹಾರಥೋತ್ಸವ ಜರಗಿತು. ತಂತ್ರಿ ವೇ| ಮೂ| ಉದಯ ಪಾಂಗಣ್ಣಾಯರ ಪೌರೋಹಿತ್ಯದಲ್ಲಿ ಪ್ರಧಾನ ಅರ್ಚಕ ಟಿ. ವಿಷ್ಣುಮೂರ್ತಿ ಭಟ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಪೂಜಾ ವಿಧಿ ವಿಧಾನ ನಡೆಯಿತು. ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ ಅಜಿಲ ಉಪಸ್ಥಿತರಿದ್ದರು. ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಸದಸ್ಯರಾದ ಭಾಸ್ಕರ ಬಲ್ಯಾಯ, ಅಶೋಕ್ ಪಾಣೂರು, ಸತೀಶ್ ಹೆಗ್ಡೆ, ಶಶಿಧರ ಶೆಟ್ಟಿ, ಸೇಸ ಎಂ., ಶಿವಪ್ರಭಾ ರಾವ್, ವಿಮಲಾ, ದೇವಸ್ಥಾನದ ಸಿಬಂದಿ ಕೊರಗಪ್ಪ ಎಂ. ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ನಿರ್ವಹಿಸಿದರು.
ಶ್ರೀಕ್ಷೇತ್ರದಲ್ಲಿ ಎ. 25ರಂದು ಭದ್ರಕಾಳಿ ದೇವಿಯ ಪ್ರತಿಷ್ಠಾ ಮಹೋತ್ಸವ ಜರಗಲಿದ್ದು, ಈ ಸಂದರ್ಭ ಚಂಡಿಕಾಹೋಮ, ಹೂವಿನಪೂಜೆ ಜರಗಲಿದೆ.