ಪುಂಜಾಲಕಟ್ಟೆ: ಪುನಃ ನಿರ್ಮಾಣಗೊಂಡ ಬಂಟ್ವಾಳ ತಾಲೂಕು ಸಿದ್ದಕಟ್ಟೆ ಸಮೀಪದ ಎಲಿಯಮಾಗಣೆಯ ಎಲಿಯನಡುಗೋಡು ಗ್ರಾಮದ ಉಪ್ಪಿರ ಶ್ರೀ ಮುಜಿಲ್ನಾಯ ದೈವಸ್ಥಾನದ ಸಪರಿವಾರ ಸಹಿತ ರಾಜನ್ ದೈವಗಳಾದ ಶ್ರೀ ಕೊಡಮಣಿತ್ತಾಯ ದೈವಸ್ಥಾನದಲ್ಲಿ ಪ್ರತಿಷ್ಠಾ ಕಲಶೋತ್ಸವ ಹಾಗೂ ನೇಮೋತ್ಸವ ರವಿವಾರ ರಾತ್ರಿ ಸಂಪನ್ನಗೊಂಡಿತು.
ಮಾರೂರು ಖಂಡಿಗ ರಾಮದಾಸ ಆಸ್ರಣ್ಣ ಅವರ ಮಾರ್ಗದರ್ಶನದಲ್ಲಿ, ಪೂಂಜ ಶ್ರೀ ಪಂಚದುರ್ಗಾಪರಮೇಶ್ವರಿ ದೇವಸ್ಥಾನದ ಆಸ್ರಣ್ಣ ಕೃಷ್ಣಪ್ರಸಾದ್ ಪೂಂಜ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು.
ರಾತ್ರಿ ಶ್ರೀ ಕೊಡಮಣಿತ್ತಾಯ,ಶ್ರೀ ಮುಜಿಲ್ನಾಯ, ಶ್ರೀ ದೈವ ಮಹಿಷಂದಾಯ, ಶ್ರೀ ವ್ಯಾಘ್ರ ಚಾಮುಂಡಿ ದೈವ, ಶ್ರೀ ಪಂಜುರ್ಲಿ ಮತ್ತು ಪರಿವಾರ ದೈವಗಳ ನೇಮ ನಡೆಯಿತು. ರಾತ್ರಿ ಅನ್ನ ಸಂತರ್ಪಣೆ ನಡೆಯಿತು. ನೇಮೋತ್ಸವಕ್ಕೆ ದೈವಸ್ಥಾನಕ್ಕೆ ಸಂಬಂಧಿಸಿದ ಎಲಿಯ ಮಾಗಣೆಯ ಎಲಿಯ ನಡುಗೋಡು, ಕುಕ್ಕಿಪಾಡಿ, ಆರಂಬೋಡಿ, ಸಂಗಬೆಟ್ಟು, ಕಣಿಯೂರು ಗ್ರಾಮಗಳ ಭಕ್ತರಲ್ಲದೆ ಪರಊರುಗಳಿಂದಲೂ ಭಕ್ತ ಜನಸಾಗರ ಹರಿದು ಬಂದಿತ್ತು. ಊಟೋಪಹಾರ, ಸ್ವತ್ಛತೆ, ಪಾರ್ಕಿಂಗ್ ವ್ಯವಸ್ಥೆಗಳಲ್ಲಿ ಸ್ವಯಂಸೇವಕರು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ಜನರ ಪ್ರಶಂಸೆಗೆ ಪಾತ್ರವಾಯಿತು.
ಆಡಳಿತ ಸಮಿತಿ ಗೌರವಾಧ್ಯಕ್ಷ ಕುಲದೀಪ್ ಎಂ. ಚೌಟರ ಅರಮನೆ ಮೂಡಬಿದಿರೆ, ಅಧ್ಯಕ್ಷ ಶ್ರೀಪ್ರಕಾಶ್ ಕೆ., ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಅಟ್ಲೊಟ್ಟು ಗುತ್ತು (ಕೇದಗೆ), ಆಡಳಿತ ಸಮಿತಿ ಗೌರವ ಸಲಹೆಗಾರರಾದ ಪಿ. ಅನಂತ ಆಚಾರ್ಯ ಪೂಂಜ, ಶ್ರೀನಿವಾಸ ಪಾರಡ್ಕರ್ ಕಾನ, ಕಾರ್ಯದರ್ಶಿ ಉಮೇಶ್ ಹಿಂಗಾಣಿ, ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಸುದರ್ಶನ್ ಜೈನ್, ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರತ್ನಾಕರ ಎಸ್. ಶೆಟ್ಟಿ ಹೊಕ್ಕಾಡಿಗೋಳಿ, ಕೋಶಾಧಿಕಾರಿ ಸುಧೀಂದ್ರ ಶೆಟ್ಟಿ, ಕಲಾಯಿದಡ್ಡ, ಆಡಳಿತ ಸಮಿತಿ ಸದಸ್ಯರಾದ ಉದಯಕುಮಾರ್ ಜೈನ್ ಸಂಗಬೆಟ್ಟುಗುತ್ತು, ಧನಂಜಯ ಕುಮಾರ್ ನಡ್ಯೋಡಿಗುತ್ತು, ವಸಂತ ಜೈನ್ ಕುಕ್ಕೇಡಿಗುತ್ತು, ರವೀಂದ್ರ ಪ್ರಭು ಅರಮನೆ, ಜಗತ್ಪಾಲ ಶೆಟ್ಟಿ ಉಮನೊಟ್ಟು, ರತ್ನಕುಮಾರ್ ಚೌಟ ಮಾಂಗಾಜೆ, ಸುರೇಶ್ ಶೆಟ್ಟಿ ಪೂವಳ ಸಿದ್ದಕಟ್ಟೆ, ಜನಾರ್ದನ ಬಂಗೇರ ತಿಮರಡ್ಡ, ಗೋಪಾಲಗೌಡ ಕೋರ್ಯಾರು ಮತ್ತಿತರರಿದ್ದರು.