ಬೆಳ್ತಂಗಡಿ : ಉಜಿರೆ ಸಮೀಪದ ಚಾಮುಂಡಿನಗರ ಓಡಲದ ಶ್ರೀ ವ್ಯಾಘ್ರ ಚಾಮುಂಡೇಶ್ವರಿ ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಸೋಮವಾರ ಅಶ್ವತ್ಥ ಮರಕ್ಕೆ ಉಪನಯನ ಹಾಗೂ ಮದುವೆ ಸಮಾರಂಭ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಜರಗಿತು.
ಪ್ರಕೃತಿಗೆ ಮನುಷ್ಯನೇ ಶಾಪವಾಗಿರುವ ಈ ಕಾಲಘಟ್ಟದಲ್ಲಿಯೂ ಅಶ್ವತ್ಥ ಮರವನ್ನು ಆರಾಧನೆ ಮಾಡುವ ಮೂಲಕ ಪರಿಸರದ ಬಗೆಗಿನ ಪ್ರೀತಿಗೆ ಸಾಕ್ಷಿಯಾಗಿದೆ. ಬ್ರಹ್ಮಶ್ರೀ ಉಚ್ಚಿಲತ್ತಾಯ ನೀಲೇಶ್ವರ ಪದ್ಮನಾಭ ತಂತ್ರಿಗಳ ಸಹಭಾಗಿತ್ವದಲ್ಲಿ ಪ್ರಧಾನ ಅರ್ಚಕ ಪಿ. ರಾಜಗೋಪಾಲ ಯಡಿಪಡಿತ್ತಾಯ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿ-ವಿಧಾನಗಳು ನೆರವೇರಿದವು.
ಈ ಸಂದರ್ಭದಲ್ಲಿ ಶ್ರೀ ವ್ಯಾಘ್ರ ಚಾಮುಂಡಿ ಸೇವಾ ಟ್ರಸ್ಟ್ನ ಮ್ಯಾನೇಜಿಂಗ್ ಟ್ರಸ್ಟಿ ಎಂ.ಜಿ. ಶೆಟ್ಟಿ,ವರ್ಧಂತಿ ಉತ್ಸವ ಸಮಿತಿಯ ಸಂಚಾಲಕ ಎಸ್.ವಿ. ಹೆಗ್ಡೆ, ಟ್ರಸ್ಟಿಗಳು, ಸಮಿತಿ ಸದಸ್ಯರು, ನೂರಾರು ಭಕ್ತರು ಭಾಗಿಯಾಗಿದ್ದರು.
ಅಶ್ವತ್ಥ ಮರದ ಆರಾಧನೆ
ಮೊದಲಿಗೆ ಉಪನಯನ ನೆರವೇರಿಸಿದ ಬಳಿಕ ಪ್ರೌಢಾವಸ್ಥೆಗೆ ಅಂದರೆ ಮರದಲ್ಲಿ ಸಾವಿರ ಎಲೆಗಳು ಆದ ಅನಂತರ ಮದುವೆ ಮಾಡಿಸಲಾಗುತ್ತದೆ. ಅದರಂತೆ ಅಶ್ವತ್ಥ ಮರಕ್ಕೆ ವಿವಾಹ ನೆರವೇರಿಸಲಾಯಿತು. ಅಶ್ವತ್ಥಕಟ್ಟೆಯಲ್ಲಿ ಪಂಚಗವ್ಯ, ಪುಣ್ಯಾಹ, ಕಲಶ ಪ್ರತಿಷ್ಠೆ, ಗಣಪತಿ ಹೋಮ, ಉಪನಯನ, ಮದುವೆ ನೆರವೇರಿಸಲಾಯಿತು.