ಇನ್ನಂಜೆ: ಉಂಡಾರು ಶ್ರೀವಿಷ್ಣುಮೂರ್ತಿ ದೇವಸ್ಥಾನದ ನವೀಕೃತ ದೇವಾಲಯದ ಸಮರ್ಪಣಾ, ಬಿಂಬಪ್ರತಿಷ್ಠಾಪನಾ, ಬ್ರಹ್ಮಕಲಶ ಮಹೋತ್ಸವ ಹಾಗೂ ಶ್ರೀಮನ್ಮಹಾರಥೋತ್ಸವ ಏ.18ರಿಂದ 27ರವರೆಗೆ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ವಿಶ್ವೋತ್ತಮತೀರ್ಥ ಶ್ರೀಪಾದರು, ಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದಂಗಳವರ ದಿವ್ಯ ಉಪಸ್ಥಿತಿಯಲ್ಲಿ ವೇದಮೂರ್ತಿ ಪುತ್ತೂರು ಮಧುಸೂದನ ತಂತ್ರಿಯವರ ನೇತೃತ್ವದಲ್ಲಿ ಅವಧಾನಿ ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಇವರ ಸಹಯೋಗದೊಂದಿಗೆ ಆಗಮೋಕ್ತ ವಿಧಿ, ವಿಧಾನಗಳೊಂದಿಗೆ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದೆ.
18ರಂದು ಬೆಳಗ್ಗೆ 8.30ಕ್ಕೆ ಸಾಮೂಹಿಕ ದೇವತಾ ಪ್ರಾರ್ಥನೆ, ತೋರಣ ಮುಹೂರ್ತ, ಉಗ್ರಾಣ ಮುಹೂರ್ತ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 3ರಿಂದ ಶಂಕರಪುರ ಅಶ್ವತ್ಥ ಕಟ್ಟೆಯಿಂದ ಹೊರೆಕಾಣಿಕೆ ಮೆರವಣಿಗೆ ಹಾಗೂ ವೈಭವದ ಶೋಭಾಯಾತ್ರೆಯೊಂದಿಗೆ ಸುವರ್ಣ ಕವಚ ಹಾಗೂ ಅಟ್ಟೆ ಪ್ರಭಾವಳಿ, ಬೆಳ್ಳಿಯ ತೊಟ್ಟಿಲು ಸಮರ್ಪಣೆ. ಸಾಯಂಕಾಲ 5ಗಂಟೆಯಿಂದ ಸಪ್ತಶುದ್ಧಿ, ಅಂಕುರಾರೋಹಣ, ಪ್ರಸಾದ ಶುದ್ದಿ, ರಾಕ್ಷೋಘ್ನ ಹೋಮ, ಮಂಟಪ ಸಂಸ್ಕಾರ, ಪ್ರಾಕಾರ ಬಲಿ, ರಾತ್ರಿಪೂಜೆ ನಡೆಯಲಿದೆ.
ಸಂಜೆ 5.30ರಿಂದ ಶ್ರೀ ವಿಶ್ವೋತ್ತಮ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಸಭಾ ಕಾರ್ಯಕ್ರಮ ನಡೆಯಲಿದೆ. ಸೋದೆ ಶ್ರೀವಾದಿರಾಜ ಮಠದ ಪೂಜ್ಯ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಲಿದ್ದು, ಪೇಜಾವರ ಮಠದ ಪೂಜ್ಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಆಶೀರ್ವಚನ ನೀಡಲಿದ್ದಾರೆ.
ಉದಯ್ ಕುಮಾರ್ ಸರಳತ್ತಾಯ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಅಂಬಲಪಾಡಿ ಧರ್ಮದರ್ಶಿ ನಿ.ಬಿ.ವಿಜಯ ಬಲ್ಲಾಳ್, ಜಾನಪದ ವಿದ್ವಾಂಸ ಕೆಎಲ್ ಕುಂಡಂತಾಯ, ಮಾಜಿ ಶಾಸಕ ಲಾಲಾಜಿ ಮೆಂಡನ್, ಥಾಣೆ ಬಂಟ್ಸ್ ಅಸೋಶಿಯೇಶನ್ ಅಧ್ಯಕ್ಷ ಕುಶಾಲ್ ಸಿ.ಭಂಡಾರಿ, ಸಮಾಜ ಸೇವಕ ಲೀಲಾಧರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.