ಉಡುಪಿ: ಮುಂಬೈ ಬಾಲಮಿತ್ರ ಮಂಡಳಿಯ ಆಲಾರೆ ಗೋವಿಂದ ತಂಡವು ಶ್ರೀ ಕೃಷ್ಣ ಮಠದ ರಥ ಬೀದಿ ಮತ್ತು ನಗರದ ವಿವಿಧೆಡೆ ಶನಿವಾರ ಮೈನವಿರೇಳಿಸುವ ಮಾನವ ಪಿರಮಿಡ್ ರಚಿಸಿ ಎತ್ತರದ ದಹಿ ಹಂಡಿಯನ್ನು ಒಡೆಯುವ ಮೂಲಕ ತನ್ನ ಕರಾಮತ್ತನ್ನು ಪ್ರದರ್ಶಿಸಿದೆ.
ವಿಟ್ಲ ಪಿಂಡಿ ಮಹೋತ್ಸವದ ಅಂಗವಾಗಿ ಕನಕ ಸಾಂಸ್ಕೃತಿಕ ವೇದಿಕೆಯ ಆಯೋಜಿಸಿದ ಮಧುಸೂದನ್ ಪೂಜಾರಿ ಕೆಮ್ಮಣ್ಣು ಅವರ ನೇತೃತ್ವದ ಪೂರ್ವ ಮುಂಬಯಿ ಸಾಂತಕ್ರೂಸ್ ಬಾಲಮಿತ್ರ ಮಂಡಳಿಯ ಆಲಾರೆ ಗೋವಿಂದ ತಂಡದ ಸದಸ್ಯರು ಉಡುಪಿಯಲ್ಲಿ ಮೊಸರು ಕುಡಿಕೆ ಒಡೆದರು. ಈ ತಂಡದಲ್ಲಿ 14 ವರ್ಷದಿಂದ 50 ವರ್ಷದ ವರೆಗಿನ 110 ಮಂದಿ ಸದಸ್ಯರು ಸಮವಸ್ತ್ರ ಧರಿಸಿ ನೋಡುನೋಡುತ್ತಿದ್ದಂತೆ ಮಾನವ ಪಿರಮಿಡ್ ನಿರ್ಮಿಸಿ ನೋಡುಗರನ್ನು ಆಶ್ಚರ್ಯ ಚಕಿತರನ್ನಾಗಿಸಿದರು.
ಎರಡನೇ ಪ್ರಯತ್ನ ರಥ ಬೀದಿ ಶಿರೂರು ಮಠದ ಮುಂಭಾಗದಲ್ಲಿನ 50 ಅಡಿ ಎತ್ತರದ ದಹಿ ಹಂಡಿ ಒಡೆಯುವ ಮೊದಲ ಪ್ರಯತ್ನಕ್ಕೆ ಮಳೆ ಅಡ್ಡಿಯಾಗಿತ್ತು. ಎರಡನೇ ಪ್ರಯತ್ನದಲ್ಲಿ ಸದಸ್ಯರು ಮೊಸರು ಕುಡಿಕೆ ಒಡೆದರು.
ಮಳೆ ನಡುವೆ ವೀಕ್ಷಣೆ
ಎತ್ತರದ ದಹಿ ಹಂಡಿಯನ್ನು ಒಡೆಯುವುದನ್ನು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಕಿರಿಯ ಶ್ರೀವಿದ್ಯಾರಾಜೇಶ್ವರತೀರ್ಥ ಸ್ವಾಮೀಜಿ, ಅದಮಾರು ಕಿರಿಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ ಅವರು ಮಳೆ ನಡುವೆಯೂ ಓಲಿ ಕೊಡೆಯಡಿ ನಿಂತು ವೀಕ್ಷಣೆ ಮಾಡಿದರು. ಭಾರೀ ಸಂಖ್ಯೆಯಲ್ಲಿ ಆಗಮಿಸಿದ ಜನರು ಮಳೆಯನ್ನು ಲೆಕ್ಕಿಸದೆ ಘೋಷಣೆ ಕೂಗುವ ಮೂಲಕ ಆಲಾರೆ ಗೋವಿಂದ ತಂಡವನ್ನು ಹುರಿದುಂಬಿಸಿದರು.
ವಿವಿಧ ಕಡೆ ಪ್ರದರ್ಶನ
ಕಡಿಯಾಳಿ ಓಶಿಯನ್ ಪರ್ಲ್, ಅಂಬಲಪಾಡಿ ಶ್ಯಾಮಿಲಿ ಸಭಾಂಗಣ, ಉಡುಪಿ ಪೈ ಇಂಟರ್ನ್ಯಾಶನಲ್, ತ್ರಿವೇಣಿ ಸರ್ಕಲ್, ಕಾಣಿಯೂರು ಮಠ, ಪುತ್ತಿಗೆ ಮಠ, ಪೇಜಾವರ ಮಠ, ಕಿದಿಯೂರು ಹೊಟೇಲ್ ಎದುರು, ಡಯಾನ ಹೊಟೇಲ್ ಎದುರಿನ ದಹಿ ಹಂಡಿ ಒಡೆದರು.