ಉಡುಪಿ: ಶ್ರೀಕೃಷ್ಣಮಠದ ದರ್ಶನಕ್ಕೆ ನಿತ್ಯ ಆಗಮಿಸುವ ಸಾವಿರಾರು ಯಾತ್ರಾರ್ಥಿಗಳಿಗೆ ಅನುಕೂಲವಾಗಲೆಂದು ಶ್ರೀಕೃಷ್ಣಮಠದ ವಾಹನ ಪಾರ್ಕಿಂಗ್ ಪ್ರದೇಶದಲ್ಲಿ ಮಂಗಳೂರಿನ ಎಂಆರ್ಪಿಎಲ್ ಸಂಸ್ಥೆ ತನ್ನ ಸಿಎಸ್ಆರ್ ನಿಧಿಯಿಂದ ನಿರ್ಮಿಸಿಕೊಟ್ಟ ಸುಸಜ್ಜಿತ ಸ್ನಾನ ಮತ್ತು ಶೌಚಗೃಹ ಸಂಕೀರ್ಣ “ಸ್ವಚ್ಛಾಂಗಣ’ವನ್ನು ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಬುಧವಾರ ಉದ್ಘಾಟಿಸಿದರು.
ಕಿರಿಯ ಶ್ರೀಗಳಾದ ಶ್ರೀವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ರಾಜ್ಯದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಧಾರ್ಮಿಕ ದತ್ತಿ ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಕೆ.ರಘುಪತಿ ಭಟ್, ಸುನೀಲ್ಕುಮಾರ್, ಅಂಬಲಪಾಡಿ ದೇವಸ್ಥಾನದ ಧರ್ಮದರ್ಶಿ ಡಾ|ನಿ.ಬೀ.ವಿಜಯ ಬಲ್ಲಾಳ್, ಜಿಲ್ಲಾಧಿಕಾರಿ ಜಿ.ಜಗದೀಶ್, ಪೌರಾಯುಕ್ತ ಆನಂದ ಕಲ್ಲೋಳಿಕರ್, ಎಂಆರ್ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್, ಶ್ರೀಕೃಷ್ಣಮಠ ಪರಿಸರ ಪ್ರತಿಷ್ಠಾನದ ಕಾರ್ಯದರ್ಶಿ ರತ್ನಕುಮಾರ್, ಸ್ವತ್ಛಂ ಕ್ಲೀನಿಂಗ್ ಸರ್ವಿಸಸ್ನ ತಾರಾನಾಥ, ಗುತ್ತಿಗೆದಾರರಾದ ಶೈಲೇಶ್, ವೆಂಕಟೇಶ್ ಶೇಟ್ ಮೊದಲಾದವರು ಉಪಸ್ಥಿತರಿದ್ದರು.
ದೊಡ್ಡ ಸಂಖ್ಯೆಯಲ್ಲಿ ಯಾತ್ರಾರ್ಥಿಗಳು ಬರುವಾಗ ಇಂತಹ ಸ್ವಚ್ಛತೆಯ ಅಗತ್ಯ ಕಂಡುಬರುತ್ತದೆ. ಇದನ್ನು ಮನಗಂಡು ಎಂಆರ್ಪಿಎಲ್ನವರು ಸ್ನಾನಗೃಹ- ಶೌಚಗೃಹವನ್ನು ನಿರ್ಮಿಸಿಕೊಟ್ಟಿ ರುವುದು ಶ್ಲಾಘನೀಯ. ಡಿ. 25ರಂದು ಅಟಲ್ ಬಿಹಾರಿ ವಾಜಪೇಯಿಯವರ ಜನ್ಮದಿನ. ದೇಶದ ಅಗತ್ಯವನ್ನು ಮನಗಂಡು ಪ್ರಧಾನಿ ಯವರೂ ಸ್ವತ್ಛತೆಗೆ ಆದ್ಯತೆ ನೀಡಿದ್ದಾರೆ ಎಂದು ಮುಖ್ಯಮಂತ್ರಿಗಳು ನುಡಿದರು.
ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆದ ಸಭೆಯಲ್ಲಿ ಆಡಳಿತಾಧಿಕಾರಿ ಪ್ರಹ್ಲಾದ ರಾವ್ ಅವರು ಮಾತನಾಡಿ, ಪ್ರಧಾನಿಯವರ ಸ್ವತ್ಛಭಾರತ ಪರಿಕಲ್ಪನೆಯಡಿ ಯೋಜನೆ ಮೂಡಿಬಂದಿದೆ. ಎಂಆರ್ಪಿಎಲ್ನ ಹಿಂದಿನ ಹಿರಿಯ ಅಧಿಕಾರಿಗಳು ಯೋಜನೆಯನ್ನು ಮಂಜೂರುಗೊಳಿಸಿ ದ್ದರು. ತದನಂತರ ಬಂದ ಅಧಿಕಾರಿಗಳ ಸಹಕಾರದಿಂದ ಯೋಜನೆ ಪೂರ್ಣಗೊಂಡಿದೆ ಎಂದರು.
“ಸ್ವಚ್ಛಾಂಗಣ’ವು ಸುಮಾರು 2 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ತಳಅಂತಸ್ತಿನಲ್ಲಿ 5 ಲಕ್ಷ ಲೀಟರ್ ನೀರು ಸಂಗ್ರಹಣ ತೊಟ್ಟಿಯನ್ನು ಸುಮಾರು 50 ಲ.ರೂ. ವೆಚ್ಚದಲ್ಲಿ, ನೆಲ ಮಟ್ಟ ಮತ್ತು ಮಹಡಿಯಲ್ಲಿ ಸುಮಾರು 8,000 ಚದರಡಿ ವಿಸ್ತೀರ್ಣದಲ್ಲಿ ಸ್ನಾನ ಗೃಹ ಮತ್ತು ಶೌಚಗೃಹ ಸಂಕೀರ್ಣವನ್ನು ಸುಮಾರು 1.5 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 46 ಶೌಚಾಲಯ, 48 ಸ್ನಾನಗೃಹಗಳಿವೆ. ಜ. 18ರಂದು ಪರ್ಯಾಯೋತ್ಸವ ನಡೆಯುವ ಪೂರ್ವಭಾವಿಯಾಗಿ ಸಂಕೀರ್ಣ ಬಳಕೆಗೆ ಬರುವಂತಾಗಿದೆ.