ಉಡುಪಿ: ಶ್ರೀವಾದಿರಾಜ ಸ್ವಾಮಿಗಳ ಆರಾಧನೋತ್ಸವವನ್ನು ಶ್ರೀಕೃಷ್ಣಮಠದಲ್ಲಿ ಶ್ರೀಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಗುರುವಾರ ಆಚರಿಸಿದರು.
ಶ್ರೀಕೃಷ್ಣನಿಗೆ ಮಧ್ಯಾಹ್ನ ಮಹಾಪೂಜೆ ನಡೆಸಿದ ಬಳಿಕ ಶ್ರೀಈಶಪ್ರಿಯತೀರ್ಥರು ಪಾದ್ಯವನ್ನಿತ್ತರು. ದಿನವಿಡೀ ಶ್ರೀವಾದಿ ರಾಜರು ಮತ್ತು ಶ್ರೀವ್ಯಾಸರಾಜರ ಕೃತಿಗಳ ಪಾರಾಯಣವನ್ನು ವೈದಿಕರು ನಡೆಸಿದರು.
ಅಪರಾಹ್ನ ರಥಬೀದಿಯಲ್ಲಿ ವಾದಿ ರಾಜರು ಮತ್ತು ವ್ಯಾಸರಾಜರ ಕೃತಿಗಳನ್ನು ಚಿನ್ನದ ರಥದಲ್ಲಿ ಮೆರವಣಿಗೆ ನಡೆಸಲಾಯಿತು. ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರು ಮತ್ತು ಶ್ರೀಈಶಪ್ರಿಯ ತೀರ್ಥರು ಪಾಲ್ಗೊಂಡಿದ್ದರು.
ಸಂಜೆ ರಾಜಾಂಗಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ವಿಜಯಸಿಂಹ ತೋಟಂತಿಲ್ಲಾಯ ಅವರು ವಾದಿರಾಜರು, ವ್ಯಾಸರಾಜರು ವೇದಾಂತ ಕ್ಷೇತ್ರಕ್ಕೆ ಕೊಟ್ಟ ಅಮೂಲ್ಯ ಕೊಡುಗೆಗಳ ಬಗ್ಗೆ ವಿವರಿಸಿದರು. ಹಿರಿಯ ಸಾಧಕರು ಕೊಟ್ಟ ಸಂದೇಶಗಳನ್ನು ಪಾಲಿಸಿಕೊಂಡು ಹೋಗಬೇಕಾದ ಅಗತ್ಯವಿದೆ ಎಂದು ಶ್ರೀಪಾದರು ನುಡಿದರು.
ವಾದಿರಾಜರ ಮೂಲ ವೃಂದಾವನ ವಿರುವ ಶಿರಸಿ ಸಮೀಪದ ಸೋಂದಾ ಕ್ಷೇತ್ರದಲ್ಲಿ ಆರಾಧನೋತ್ಸವ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಜರಗಿತು.