ಉಡುಪಿ : ಶ್ರೀಕೃಷ್ಣ ಮಠದಲ್ಲಿ ಮಹಾ ಭಾರತದ ಪರಿಷ್ಕೃತ ಸಮಗ್ರ ಸಂಪುಟ ಗುರುವಾರ ಲೋಕಾರ್ಪಣೆಗೊಂಡಿತು. ಪುಣೆಯ ಭಂಡಾರ್ ಕಾರ್ ಸಂಶೋಧನ ಸಂಸ್ಥೆಯಲ್ಲಿ ಮಹಾಭಾರತದ ಸಂಪಾದನೆಯನ್ನು ಘೋಷಿಸಿದ 100 ವರ್ಷಗಳ ಬಳಿಕ ಇದು ಪ್ರಕಟಗೊಂಡುದು ವಿಶೇಷ.
ವೇದವ್ಯಾಸರ ಮಹಾಭಾರತ, ಇದಕ್ಕೆ ಮಧ್ವರು ಬರೆದ ತಾತ್ಪರ್ಯ ನಿರ್ಣಯ, ವಾದಿರಾಜರ ಲಕ್ಷಾಲಂಕಾರಗಳನ್ನು ಒಂದೆಡೆ ಸೇರಿಸಿ ಹೊರತಂದ ಸಂಪುಟದಿಂದ ಅಧ್ಯಯನ ಸುಲಭವಾಗಲಿದೆ ಎಂದು ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ನುಡಿದರು.
ಪೇಜಾವರ ಶ್ರೀಪಾದರು ಮಾತನಾಡಿ, ಗಂಗಾ ನದಿಯು ಭಗವಂತನ ಪಾದದಿಂದ ಜನಿಸಿದರೆ, ಮಹಾಭಾರತ ಭಗವಂತನ ಸ್ವರೂಪವಾದ ವೇದ ವ್ಯಾಸರ ಮುಖದಿಂದ ಬಂದಿದೆ. ಗಂಗೆಯನ್ನು ಶುದ್ಧೀಕರಿಸಲು ಇನ್ನೂ ಸಾಧ್ಯವಾಗಿಲ್ಲ. ಮಹಾ ಭಾರತದ ಶುದ್ಧಪಾಠವನ್ನು ಹೊರತರಲು ಸಾಧ್ಯವಾಗಿರುವುದು ನಮ್ಮ ಸುಕೃತ ಎಂದರು.
ಭಗವಂತನ ಚರಿತ್ರೆಯನ್ನು ಹೊಂದಿದ ಇತಿಹಾಸ ಭಾರತದ್ದು ಎನ್ನುವುದು ನಮಗೆ ಮ್ಮೆ ಎಂದು ಕೃಷ್ಣಾಪುರ ಶ್ರೀಪಾದರು ಅಭಿಪ್ರಾಯಪಟ್ಟರು. ವೇದಗಳ ಸಾರವಾದ ಮಹಾಭಾರತದ ಅಧ್ಯಯನ ಅಗತ್ಯ ಎಂದು ಶ್ರೀ ಅದಮಾರು ಶ್ರೀಪಾದರು ಹೇಳಿದರು.
ಶ್ರೀ ಭಂಡಾರಕೇರಿ ಮಠದ ಶ್ರೀವಿದ್ಯೆàಶತೀರ್ಥ ಶ್ರೀಪಾದರು, ಶ್ರೀ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು, ಶ್ರೀ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು, ಶ್ರೀ ಸೋದೆ ಮಠದ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಶ್ರೀ ಭೀಮನಕಟ್ಟೆ ಮಠದ ಶ್ರೀ ರಘುವರೇಂದ್ರತೀರ್ಥ ಶ್ರೀಪಾದರು, ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು, ಪ್ರಯಾಗ ಮಠದ ಶ್ರೀ ವಿದ್ಯಾತ್ಮತೀರ್ಥ ಶ್ರೀಪಾದರು ಶುಭ ಕೋರಿದರು.
ನಾಗಪುರ ಸಂಸ್ಕೃತ ವಿ.ವಿ. ಕುಲಪತಿ ಡಾ| ಶ್ರೀನಿವಾಸ ವರಖೇಡಿಯವರು ಪುಣೆಯ ಭಂಡಾರ್ಕಾರ್ ಸಂಸ್ಥೆಯನ್ನು ಸ್ಮರಿಸಿಕೊಂಡರು. ಮೈಸೂರಿನ ಶೇಷಗಿರಿ ರಾವ್, ಡಾ| ಕಡಂದಲೆ ಗಣಪತಿ ಭಟ್, ಮೈಸೂರು ರಾಮಚಂದ್ರ ಆಚಾರ್ಯ ಉಪಸ್ಥಿತರಿದ್ದರು. ಶಿಬರೂರು ವೇದವ್ಯಾಸ ತಂತ್ರಿ ಸ್ವಾಗತಿಸಿ, ಡಾ| ವಂಶಿ ಕೃಷ್ಣಾಚಾರ್ಯ ನಿರೂಪಿಸಿದರು. ಬೆ.ನಾ. ವಿಜಯೀಂದ್ರ ಆಚಾರ್ಯ ಪ್ರಸ್ತಾವನೆಗೈದರು.