ಉಡುಪಿ: ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ತಮ್ಮ ಕೊನೆಯ ಸಂದೇಶ ನೀಡಿದ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ಅವರ ಆರಾಧನೋತ್ಸವ ನಡೆಯಿತು. ಶ್ರೀವಿಶ್ವೇಶತೀರ್ಥರು ಮತ್ತು ಅವರ ವಿದ್ಯಾಗುರುಗಳಾದ ಶ್ರೀವಿದ್ಯಾಮಾನ್ಯತೀರ್ಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನಡೆಸಿ ದೀಪ ಬೆಳಗಿಸಿ ಪರ್ಯಾಯ ಶ್ರೀಪಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪೇಜಾವರ ಶ್ರೀಗಳ ದಾರಿ ಪಾಲಿಸೋಣ
ಶ್ರೀಪೇಜಾವರ ಶ್ರೀಗಳು ಒಂದೆಡೆ ಸಮಾಜ ಸುಧಾರಣೆ, ಇನ್ನೊಂದೆಡೆ ಅಸಾಧಾರಣ ಶಾಸ್ತ್ರ ಪಾಂಡಿತ್ಯದ ವ್ಯವಸಾಯ ವನ್ನು ಜೀವಿತದ ಕೊನೆಯವರೆಗೂ ಪಾಲಿಸಿಕೊಂಡು ಬಂದರು. ಅವರು ನಡೆದುಬಂದ ದಾರಿಯಲ್ಲಿ ನಾವು ಸಾಗುವುದೇ ಅವರಿಗೆ ಸಲ್ಲಿಸುವ ಶ್ರದ್ಧಾಂಜಲಿ ಎಂದು ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು ಹೇಳಿದರು.
ಶ್ರೀವಿದ್ಯಾರಾಜೇಶ್ವರತೀರ್ಥರು, ಉದ್ಯಮಿ ಭುವನೇಂದ್ರ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು. ರಾಜಾಂ ಗಣದಲ್ಲಿ ಭಕ್ತರಿಗೆ ಭೋಜನ ಪ್ರಸಾದದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬೆಳಗ್ಗೆ ಶ್ರೀಪೇಜಾವರ ಶ್ರೀಗಳಿಗೆ ಸಂಪ್ರಾರ್ಥಿಸಿ ಪೂಜೆ, ಪಾರಾಯಣಾದಿಗಳು ನಡೆದವು. ರಾಜ್ಯದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಅಣ್ಣಾಸಾಹೇಬ್ ಜೊಲ್ಲೆ , ಶಾಸಕ ರಘುಪತಿ ಭಟ್ ಅವರು ಪೇಜಾವರ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅನ್ನಸಂತರ್ಪಣೆಯಲ್ಲಿ ಭಾಗವಹಿಸಿದರು ಮತ್ತು ಭಕ್ತರಿಗೆ ಸ್ವತಃ ಬಡಿಸಿದರು.
ಪೇಜಾವರ ಮಠದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾಲಂಕಾರ ನಡೆಸಲಾಯಿತು. ವಿವಿಧ ಪಾರಾಯಣ, ಭಜನೆಗಳನ್ನು ಭಕ್ತರು ನಡೆಸಿಕೊಟ್ಟರು. ಪೆರ್ಣಂಕಿಲ, ಮುಚ್ಚಲಕೋಡು ದೇವಸ್ಥಾನ ಗಳಲ್ಲಿ ಅನ್ನಸಂತರ್ಪಣೆ ನಡೆಯಿತು. ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆಗಳು, ಹಾಸ್ಟೆಲ್ಗಳಲ್ಲಿ ಭೋಜನ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.
ಶ್ರೀವಿಶ್ವೇಶತೀರ್ಥರು ಮಹಾಮಹಿಮರು
ಶ್ರೀವಿಶ್ವೇಶತೀರ್ಥ ಶ್ರೀಪಾದರು ವಿದ್ಯಾಭ್ಯಾಸ, ಧಾರ್ಮಿಕ, ದೀನದಲಿತರಿಗೆ ಸೌಲಭ್ಯ ಮೊದಲಾದ ಎಲ್ಲ ಕ್ಷೇತ್ರಗಳಲ್ಲೂ ತಮ್ಮದೇ ಛಾಪನ್ನು ಮೂಡಿಸಿದವರು. ಹಿಂದೆ ತುರ್ತು ಪರಿಸ್ಥಿತಿಯ ಕಾಲದಲ್ಲಿ ಬಡವರ ಪರಿಸ್ಥಿತಿಯ ಕುರಿತು ಇಂದಿರಾಗಾಂಧಿಯವರಿಗೆ ಪತ್ರ ಬರೆದವರು. ಪೂಜೆ, ಪಾಠ, ಪ್ರವಚನದ ಜತೆಗೆ ತನ್ನಲ್ಲಿ ಬಂದ ಮಕ್ಕಳಿಂದ ಹಿಡಿದು ವೃದ್ಧರ ತನಕ ಎಲ್ಲರ ಮಾತನ್ನು ಆಲಿಸಿ ಸಾಂತ್ವನವನ್ನು ನೀಡಿದವರು. ಕನ್ಯಾಕುಮಾರಿಯಿಂದ ಬದರಿವರೆಗೂ ಎಲ್ಲ ಧಾರ್ಮಿಕ ಕ್ಷೇತ್ರಗಳಲ್ಲಿ ಶಾಖೆಗಳನ್ನು ತೆರೆದು ಯಾತ್ರಾರ್ಥಿಗಳಿಗೆ ಅನುಕೂಲಮಾಡಿಕೊಟ್ಟಮಹಾಮಹಿಮರು.
-ಪಲಿಮಾರುಶ್ರೀ
ಪರಿಶಿಷ್ಟರ ಕಾಲನಿಯಲ್ಲಿ ಅನ್ನಸಂತರ್ಪಣೆ
ಉಡುಪಿ: ಗುರುವಾರ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಮಹಾ ಸಮಾರಾಧನೋತ್ಸವದ ಪ್ರಯುಕ್ತ ನಾಡಿನ ವಿವಿಧೆಡೆ ಅನ್ನಸಂತರ್ಪಣೆ ನಡೆಯಿತು.
ಉಡುಪಿ ಪೇಜಾವರ ಮಠದಲ್ಲಿಯೂ ಬೆಳಗ್ಗೆ ಪವಮಾನ ಹೋಮ , ಭಜನೆ, ಪಾರಾಯಣ, ಪಾದುಕಾ ಪೂಜೆ, ಮಹಾಪೂಜೆಗಳು ನಡೆದವು. ಶ್ರೀಗಳ ಆಸನದಲ್ಲಿ ಭಾವಚಿತ್ರ, ಪಾದುಕೆಗಳನ್ನಿಟ್ಟು ರಜತ ಮಂಟಪ ಸಹಿತ ವಿಶೇಷ ಪುಷ್ಪಾಲಂಕಾರ ಮಾಡಲಾಗಿತ್ತು. ಪದ್ಮನಾಭ ಭಟ್ ಕಿದಿಯೂರು ಧಾರ್ಮಿಕ ವಿಧಿಗಳನ್ನು ನೆರವೇರಿಸಿದರು. ವ್ಯವಸ್ಥಾಪಕರಾದ ವಾಸುದೇವ ಅಡಿಗ, ಇಂದು ಶೇಖರ, ಕೊಟ್ಟಾರಿಗಳಾದ ಸಂತೋಷ್ ಆಚಾರ್ಯ ವ್ಯವಸ್ಥೆಯಲ್ಲಿ ಸಹಕರಿಸಿದರು.