ಉಡುಪಿ: ಪರ್ಯಾಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಅವಧಿಯಲ್ಲಿ ದಿನಂಪ್ರತಿ 50 ಸಾವಿರ ಭಕ್ತರು, ಜ.17-18ರಂದು ನಡೆಯುವ ಪರ್ಯಾಯ ಮಹೋತ್ಸವಕ್ಕೆ ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸುವ ನಿರೀಕ್ಷೆ ಇದೆ. ಈ ದೃಷ್ಟಿಯಲ್ಲಿ ನಗರಸಭೆಯು ಸ್ವತ್ಛತೆ, ರಸ್ತೆ, ವಿದ್ಯುತ್ದೀಪ, ಮಾಹಿತಿ ಫಲಕಗಳ ಕಾಮಗಾರಿಗಳ ನಿರ್ವಹಣೆ ಮೊದಲಾದ ಕೆಲಸಗಳನ್ನು ಭರದಿಂದ ನಡೆಸುತ್ತಿದೆ.
ನೈರ್ಮಲ್ಯಕ್ಕೆ ಆದ್ಯತೆ
ಈ ಅವಧಿಯಲ್ಲಿ ಉತ್ಸವಕ್ಕೆ ಭೇಟಿ ನೀಡುವ ಭಕ್ತರಿಂದ ಸುಮಾರು 15 ಸಾವಿರ ಕೆ.ಜಿ., ವಾಣಿಜ್ಯ ಚಟುವಟಿಕೆಯಿಂದ 3 ಸಾವಿರ ಕೆ.ಜಿ., ಉಳಿದಂತೆ ಬೀದಿಬದಿ ತೆರೆದ ಪ್ರದೇಶಗಳಲ್ಲಿ 2 ಸಾವಿರ ಸೇರಿ ಒಟ್ಟು ದಿನಂಪ್ರತಿ 20 ಸಾವಿರ ಕೆ.ಜಿ. ತ್ಯಾಜ್ಯ ಉತ್ಪಾದನೆ ಆಗುವ ಲೆಕ್ಕಾಚಾರವಿದೆ. ಹೀಗಾಗಿ ನೈರ್ಮಲ್ಯ ಹಾಗೂ ಘನತ್ಯಾಜ್ಯ ವಸ್ತುಗಳ ವಿಲೇವಾರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ.
ಮಾಹಿತಿ ಕೇಂದ್ರ
ರಥಬಿದಿಯ ಪುತ್ತಿಗೆ ಮಠದ ಬಳಿ ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಮಾಹಿತಿ ಕೇಂದ್ರ ಕಾರ್ಯ ನಿರ್ವಹಿಸಲಿದ್ದು, ಇಲ್ಲಿ ಪ್ಲಾಸಿಕ್ ನಿಷೇಧ ಹಾಗೂ ಯಾವ ವಸ್ತುಗಳನ್ನು ಬಳಸಬೇಕೆಂಬ ಮಾಹಿತಿ ಜತೆಗೆ ಜನರು ಪ್ಲಾಸ್ಟಿಕ್ ಬಳಸುತ್ತಿರುವ ಬಗ್ಗೆ ಗಮ ನಕ್ಕೆ ಬಂದರೆ ದೂರು ನೀಡುವ ಅವಕಾಶವಿದೆ. ಪ್ಲಾಸ್ಟಿಕ್ ಬಗ್ಗೆ ಜಾಗೃತಿಗಾಗಿ ಸೂಚನ ಫಲಕ ಅಳವಡಿಸಲಾಗುತ್ತದೆ.
ನಗರದ ಪ್ರಮುಖ ಸಂಪರ್ಕ ರಸ್ತೆಗಳ ಕೆಲಸಗಳು ಭರದಿಂದ ಸಾಗುತ್ತಿದ್ದು. ಹಳೆಯ ಕರಾವಳಿ ದ್ವಿಪಥದ ರಸ್ತೆಯನ್ನು ಹಳೆಯ ಡಯಾನ ವೃತ್ತದಿಂದ ಕಿನ್ನಿಮೂಲ್ಕಿವರೆಗೆ ಪೇವರ್ ಫಿನಿಶ್ ಡಾಮರೀಕರಣದ ಮೂಲಕ ಸುಮಾರು 223.40 ಲಕ್ಷ ರೂ. ಮೊತ್ತದಲ್ಲಿ ಕೆಲಸ ಸಾಗುತ್ತಿದೆ.
ಶೌಚಾಲಯ ವ್ಯವಸ್ಥೆ
ಕೆಎಸ್ಸಾರ್ಟಿಸಿ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಸಂತೆಕಟ್ಟೆ ಬಸ್ ನಿಲ್ದಾಣ, ಮಣಿಪಾಲ ಟೆಂಪೋ ಸ್ಟಾಂಡ್ ಮಠದ ಪಾರ್ಕಿಂಗ್ ಬಳಿ, ರಾಜಾಂಗಣ, ಮಧ್ವಸರೋವರ ಸಾರ್ವಜನಿಕ ಶೌಚಾಲಯಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಜತೆ ತಾತ್ಕಾಲಿಕವಾಗಿ ಜೋಡುಕಟ್ಟೆ ರಸ್ತೆ, ಭುಜಂಗ ಪಾರ್ಕ್, ಬೋರ್ಡ್ ಹೈಸ್ಕೂಲ್, ಕಿದಿಯೂರು ಹೊಟೇಲ್, ಸಿಟಿಬಸ್ ನಿಲ್ದಾಣದ ಹತ್ತಿರ, ಕಲ್ಸಂಕ ರಾಯಲ್ ಗಾರ್ಡನ್, ಕಲ್ಸಂಕ ರಿಕ್ಷಾ ಪಾರ್ಕಿಂಗ್, ಬಡಗುಪೇಟೆ, ಮುಕುಂದಕೃಪಾ ಪಾರ್ಕ್, ಗೀತಮಂದಿರದ ದ್ವಾರದ ಬಳಿ, ಸಂಸ್ಕೃತ ಕಾಲೇಜು, ಹರಿಶ್ಚಂದ್ರ ಮಾರ್ಗ ಕಾರ್ಪೋರೇಷನ್ ಬ್ಯಾಂಕ್ ಹತ್ತಿರ ಹೆಚ್ಚುವರಿ ಶೌಚಾಲಯವನ್ನು ಕಲ್ಪಿಸಲಾಗುತ್ತದೆ.
ರಸ್ತೆ, ಬೀದಿ ದೀಪ ಅಳವಡಿಕೆ
33 ವಾರ್ಡ್ಗಳಲ್ಲಿ ಸುಮಾರು 157.42 ಲಕ್ಷ ವೆಚ್ಚದಲ್ಲಿ ರಸ್ತೆಗಳ ಹೊಂಡ ಮುಚ್ಚುವ ಕೆಲಸದಲ್ಲಿ ನಗರಸಭೆ ನಿರತವಾಗಿದೆ. ವಿಭಾಜಕಗಳಿಗೆ, ಸ್ವಾಗತಗೊಪುರ ಪೈಂಟಿಂಗ್, ರಸ್ತೆಯ ಝೀಬ್ರಾ ಕ್ರಾಸಿಂಗ್ ಮಾರ್ಕಿಂಗ್ ಕೆಲಸಗಳು ಜ.15 ಒಳಗೆ ಮುಗಿಸಲಾಗುವುದು. ರಾಜಾಂಗಣ, ರಥಬೀದಿ, ಕಿನ್ನಿಮೂಲ್ಕಿ ಸ್ವಾಗತಗೊಪುರದಿಂದ ಡಯಾನ ವೃತ್ತ- ತ್ರಿವೇಣಿ ವೃತ್ತದವರೆಗೆ ದಾರಿದೀಪಗಳನ್ನು ಸುಸ್ಥಿತಿಗೆ ತರಲಾಗಿದೆ.
100 ಕಸದ ಡಬ್ಬಿ
ರಥಬೀದಿ, ರಾಜಾಂಗಣ, ಪಾರ್ಕಿಂಗ್ ಸ್ಥಳ, ಮಠದ ಆವರಣ, ಸುತ್ತಮುತ್ತ ಪ್ರದೇಶ, ತೆಂಕಪೇಟೆ, ಬಡಗುಪೇಟೆ, ಸರ್ವಿಸ್, ಸಿಟಿ ಬಸ್ ನಿಲ್ದಾಣ, ಬಸ್ ನಿಲ್ದಾಣದಿಂದ ಮಠಕ್ಕೆ ಹೋಗುವ ರಸ್ತೆಗಳಲ್ಲಿ 100 ಕಸದ ಡಬ್ಬಿಗಳನ್ನು ಇಡಲಾಗುತ್ತದೆ. ಈ ಕಸಗಳ ಸಾಗಾಟಕ್ಕೆ 2 ಟಾಟಾ ಏಸ್ ಮಾದರಿಯ ವಾಹನ, ಮತ್ತು 6 ಟಿಪ್ಪರ್ಗಳು ಕಾರ್ಯ ನಿರ್ವಹಿಸಲಿವೆ. ಒಟ್ಟು 80 ಜನ ಪೌರಕಾರ್ಮಿಕರನ್ನು ಸ್ವತ್ಛತೆ ಕೆಲಸಕ್ಕೆ ನೇಮಿಸಲಾಗಿದೆ.
-ಕಾರ್ತಿಕ್ ಚಿತ್ರಾಪುರ