ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರಸಾದ ಭೋಜನಕ್ಕಾಗಿ ನೂತನ ಅನ್ನಛತ್ರ ನಿರ್ಮಾಣ ಕಾಮಗಾರಿಗೆ ಸೋಮವಾರ ಶಿಲಾನ್ಯಾಸ ನೆರವೇರಿಸಲಾಯಿತು.
ದೇವಾಲಯದ ವ್ಯವಸ್ಥಾಪನ ಸಮಿತಿ ಸದಸ್ಯರಾಗಿರುವ ಪ್ರಧಾನ ಅರ್ಚಕ ವಸಂತ ಕುಮಾರ್ ಕೆದಿಲಾಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಗುದ್ದಲಿ ಪೂಜೆ ನೆರವೇರಿಸಿದರು.
ಅಂದಾಜು ಸುಮಾರು 78 ಲಕ್ಷ ರೂ. ವೆಚ್ಚದಲ್ಲಿ ಸುಮಾರು 2 ಸಾವಿರ ಭಕ್ತರು ಏಕಕಾಲದಲ್ಲಿ ಕುಳಿತು ಅನ್ನಪ್ರಸಾದ ಸ್ವೀಕರಿಸುವಂತಹ ಸುಸಜ್ಜಿತವಾದ 8 ಸಾವಿರ ಚದರ ಅಡಿ ವಿಸ್ತಾರದ ಅನ್ನಛತ್ರ ನಿರ್ಮಾಣವಾಗಲಿದೆ. ಅನ್ನಛತ್ರದಲ್ಲಿ ಪ್ರತ್ಯೇಕ ಅಡುಗೆ ಕೋಣೆ, ಅತಿಥಿಗಳಿಗೆ, ವಿಶೇಷ ಪೂಜೆ, ಮಹಾಪೂಜೆ ಮಾಡಿಸುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. 4 ತಿಂಗಳ ಅವಧಿಯಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದೆ ಎಂದು ಸುಧಾಕರ ಶೆಟ್ಟಿ ತಿಳಿಸಿದರು.
ಅನ್ನದಾನ ಸೇವೆಗೆ ಭಕ್ತರಿಗೂ ಅವಕಾಶ ನೀಡಲಾಗುತ್ತಿದೆ. ಭಕ್ತರು ಅಕ್ಕಿಯನ್ನು ಅನ್ನದಾನಕ್ಕೆ ನೀಡಬಹುದು ಎಂದು ಹೇಳಿದರು.
ಮಂಗಳೂರಿನ ಗಿರಿಧರ ನಾೖಕ್ ದಂಪತಿ ಅನ್ನಛತ್ರ ನಿರ್ಮಾಣಕ್ಕೆ ದೇಣಿಗೆಯಾಗಿ 5 ಲಕ್ಷ ರೂ. ನೀಡಿದರು. ಅನ್ನ ಬೇಯಿಸುವ ಬಾಯ್ಲರ್ಗೆ ಈ ಹಣವನ್ನು ಬಳಸಲಾಗುವುದು ಎಂದು ಸುಧಾಕರ ಶೆಟ್ಟಿ ತಿಳಿಸಿದರು. ಗಿರಿಧರ ನಾೖಕ್ ದಂಪತಿ ದೇವಾಲಯದ ಸ್ವರ್ಣಕವಚದ ಧ್ವಜಸ್ತಂಭಕ್ಕೂ 5 ಲಕ್ಷ ರೂ. ದೇಣಿಗೆ ನೀಡಿದ್ದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ಕರುಣಾಕರ ರೈ, ಯು.ಪಿ. ರಾಮಕೃಷ್ಣ, ಜಾನು ನಾಯ್ಕ, ನಯನಾ ರೈ, ರೋಹಿಣಿ ಆಚಾರ್ಯ, ಸಂಜೀವ ನಾಯಕ್ ಕಲ್ಲೇಗ, ಬಲಆನಡು ದೈವಸ್ಥಾನದ ವ್ಯವಸ್ಥಾಪನ ಸಮಿತಿ ಸದಸ್ಯ ಚಿದಾನಂದ ಬೈಲಾಡಿ, ಪ್ರಮುಖರಾದ ಭಾಸ್ಕರ ಬಾರ್ಯ, ರೋಶನ್ ರೈ, ಸುದೇಶ್ ನಾೖಕ್, ಸುದರ್ಶನ್ ಮುರ, ಗುತ್ತಿಗೆದಾರ ಗಿರೀಶ್ ಕುಮಾರ್, ಎಂಜಿನಿಯರ್ ವೆಂಕಟ್ರಾಜ್ ಉಪಸ್ಥಿತರಿದ್ದರು.