ಕೋವಿಡ್ ಭೀತಿಯಿಂದಾಗಿ ದೇಶಾದ್ಯಂತ ಸುದೀರ್ಘ ಲಾಕ್ಡೌನ್ ಆದ ಪರಿಣಾಮ ಭಕ್ತರಿಗೆ ಪ್ರವೇಶಾವಕಾಶ ನೀಡದಿದ್ದ ದೇವಸ್ಥಾನಗಳು ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಮುಕ್ತವಾಗಿವೆ.
ಮಂಗಳೂರಿನ ವಿವಿಧ ದೇವಸ್ಥಾನಗಳಲ್ಲಿ ಎರಡೂವರೆ ತಿಂಗಳ ಬಳಿಕ ನಿತ್ಯಪೂಜೆಗಳು ಆರಂಭವಾಗಿವೆ. ಆದರೆ, ಮೊದಲ ದಿನ ದೇವಸ್ಥಾನಗಳಿಗೆ ಆಗಮಿಸಿದ್ದ ಭಕ್ತರ ಸಂಖ್ಯೆ ತೀರಾ ಕಡಿಮೆ ಇತ್ತು. ಕೋವಿಡ್ ಭೀತಿ ಹಿನ್ನೆಲೆಯಲ್ಲಿ ಸರಕಾರದ ಸೂಚನೆಯಂತೆ ದೇವಾಲಯಗಳಲ್ಲಿ ನಿಯಮಗಳ ಪಾಲನೆ ಮಾಡಲಾಯಿತು.
ದೇವಳದ ಆವರಣ ದ್ವಾರದಲ್ಲಿ ಭದ್ರತಾ ಸಿಬಂದಿ ಭಕ್ತರಿಗೆ ಸ್ಯಾನಿಟೈಸರ್ ನೀಡಿ, ದೇಹದ ತಾಪಮಾನ ತಪಾಸಣೆ ನಡೆಸಿಯೇ ಒಳ ಪ್ರವೇಶಕ್ಕೆ ಅನುಮತಿ ನೀಡಿದರು. ದೇವಾಲಯ ಒಳ ಭಾಗದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಬಾಕ್ಸ್ ಮಾದರಿಯ ಮಾರ್ಕ್ಗಳನ್ನು ಹಾಕಲಾಗಿತ್ತು. ಆ ಮಾರ್ಕ್ಗಳ ಒಳಗೆ ನಿಂತು ಒಬ್ಬಬ್ಬರಾಗಿ ದೇವರ ದರ್ಶನ ಪಡೆಯಲು ಅನುಮತಿ ನೀಡಲಾಯಿತು. ದೇವರ ದರ್ಶನ ಹೊರತಾಗಿ ತೀರ್ಥ ಪ್ರಸಾದ ಇರಲಿಲ್ಲ. ಎಲ್ಲಾ ದೇವಸ್ಥಾನಗಳಲ್ಲಿಯೂ ಒಳ ಪ್ರವೇಶಿಸಲು ಮತ್ತು ಹೊರ ಹೋಗಲು ಪ್ರತ್ಯೇಕ ದಾರಿ ವ್ಯವಸ್ಥೆಯನ್ನು ಮಾಡಲಾಗಿತ್ತು.