ಮಂಗಳೂರು : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನ. 24ರಿಂದ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವ ಆರಂಭಗೊಂಡಿದೆ. ನ. 30ರಿಂದ ಡಿ. 2ರ ವರೆಗೆ ವಿಶೇಷವಾಗಿ ನಡೆಯುವ ಚೌತಿ, ಪಂಚಮಿ, ಚಂಪಾ ಷಷ್ಠಿ ರಥೋತ್ಸವಗಳ ಸಂದರ್ಭ ಭಕ್ತರ ಅನುಕೂಲಕ್ಕಾಗಿ ವಿವಿಧ ಕ್ರಮ ಕೈಗೊಳ್ಳಲಾಗಿದೆ.
ಸಚಿವ ಕೋಟ ಶ್ರೀನಿವಾಸ ಪೂಜಾರಿ ಈಗಾಗಲೇ ಕ್ಷೇತ್ರಕ್ಕೆ ಆಗಮಿಸಿ ಪ್ರಗತಿ ಪರಿಶೀಲನ ಸಭೆ ನಡೆಸಿ, ಉರುಳು ಸೇವೆಗೆ ಸಮರ್ಪಕವಾದ ರಸ್ತೆ ವ್ಯವಸ್ಥೆ, ನೂತನ ವಸತಿಗೃಹಕ್ಕೆ ಪೀಠೊಪಕರಣ, ವಸತಿ ವ್ಯವಸ್ಥೆ, ವಾಹನಗಳ ಪಾರ್ಕಿಂಗ್ ವ್ಯವಸ್ಥೆ, ಶೌಚಾಲಯಗಳು, ಶುದ್ಧ ಕುಡಿಯುವ ನೀರು, ಭದ್ರತೆ ಇತ್ಯಾದಿ ವಿಚಾರವಾಗಿ ಸೂಕ್ತ ಕ್ರಮ ಜರುಗಿಸುವಂತೆ ಆದೇಶಿಸಿದ್ದಾರೆ.
ನಿತ್ಯ ಬೀದಿ ಶುಚಿ ಶ್ರೀ ಕ್ಷೇತ್ರದಲ್ಲಿ ಭಕ್ತಾದಿಗಳಿಂದ ಬೀದಿ ಮಡೆಸ್ನಾನ (ಉರುಳು ಸೇವೆ) ನಡೆಯಲಿದ್ದು, ಕುಮಾರಧಾರಾ ಪ್ರವೇಶ ಗೋಪುರದಿಂದ ರಥಬೀದಿ ಯವರೆಗಿನ ರಸ್ತೆ ಯುದ್ದಕ್ಕೂ ಹೊಂಡ ಮುಚ್ಚಿ, ನೀರು ಸಿಂಪಡಿಸುವುದರ ಮೂಲಕ ನಿತ್ಯ ಬೀದಿಯನ್ನು ಶುಚಿಗೊಳಿಸಲಾಗುತ್ತಿದೆ. ರಸ್ತೆ ಬದಿ ವಿದ್ಯುತ್ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಕಾಶಿಕಟ್ಟೆ – ಆದಿಸುಬ್ರಹ್ಮಣ್ಯ ರಸ್ತೆ ಮತ್ತು ಕೆಎಸ್ ಆರ್ಟಿಸಿ ಬಸ್ ನಿಲ್ದಾಣ ಪಕ್ಕದಿಂದ ಆದಿಸುಬ್ರಹ್ಮಣ್ಯಕ್ಕೆ ಬರುವ ರಸ್ತೆಯನ್ನು ಸುಸಜ್ಜಿತಗೊಳಿಸಿ ವಾಹನ ಓಡಾಟಕ್ಕೆ ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗೆ ಆದೇ ಶಿಸಲಾಗಿದೆ.
ಕುಮಾರಧಾರ ಪ್ರವೇಶ ಗೋಪುರ ದಿಂದ ಕಾಶಿಕಟ್ಟೆವರೆಗೆ 5 ಮಿನಿ ಬಸ್ ಗಳ ಉಚಿತ ವ್ಯವಸ್ಥೆ, ಭಕ್ತಾದಿಗಳಿಗೆ ಸೇವೆ ಇತ್ಯಾದಿ ಸಂಪೂರ್ಣ ಮಾಹಿತಿ ಬಗ್ಗೆ ಕಚೇರಿ ದೂರವಾಣಿ ಸಂಖ್ಯೆ ಗಳ ವ್ಯವಸ್ಥೆ, ಭದ್ರತೆ ಬಗ್ಗೆ ಹೆಚ್ಚು ವರಿ ಸಿಸಿಟಿವಿಗಳ ಅಳವಡಿಕೆ ಇತ್ಯಾದಿ ವ್ಯವಸ್ಥೆಗಳನ್ನು ಆಡಳಿತ ವತಿಯಿಂದ ಕೈಗೊಳ್ಳಲಾಗಿದೆ. ದೇಗುಲಕ್ಕೆ ದಾನಿಗಳಿಂದ ಅರ್ಪಿಸಲ್ಪಟ್ಟ ನೂತನ ಬ್ರಹ್ಮರಥದಲ್ಲಿ ಡಿ. 2ರ ಬೆಳಗ್ಗೆ ಶ್ರೀ ಸುಬ್ರಹ್ಮಣ್ಯ ದೇವರ ಬ್ರಹ್ಮರಥೋತ್ಸವವು ಜರಗಲಿದೆ. ರಥೋತ್ಸವದ ಹಿಂದಿನ ದಿನ ರವಿವಾರ ರಜಾ ದಿನವಾಗಿದ್ದು, ರಾತ್ರಿ ಪಂಚಮಿ ರಥೋತ್ಸವವು ಜರಗಲಿರುವ ಕಾರಣ ಭಕ್ತಾದಿಗಳ ಅಧಿಕ ಒತ್ತಡವಿರುವ ನಿರೀಕ್ಷೆಯಿದೆ.