ಬೆಳ್ತಂಗಡಿ: ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಲ್ಲಿ ಹೆಚ್ಚಿನ ಜನಸಂದಣಿ ಕಂಡುಬಂದಿದ್ದು, ರವಿವಾರ ಧರ್ಮಸ್ಥಳ ಕ್ಷೇತ್ರದಲ್ಲಿಯೂ ಹೆಚ್ಚಿನ ಭಕ್ತರು ದೇವರ ದರ್ಶನ ಪಡೆದಿದ್ದಾರೆ.
ಜ. 12ರಂದು 2ನೇ ಶನಿವಾರ ಹಾಗೂ ರವಿವಾರ ರಜಾದಿನವಾಗಿದ್ದು, ಜತೆಗೆ ಜ.15 ರಂದು ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಸರಕಾರಿ ರಜೆ ಇದೆ. ಹೀಗಾಗಿ ಹೆಚ್ಚಿನ ಮಂದಿ ಜ. 14ರಂದೂ ರಜೆ ಹಾಕಿ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೊರಟಿದ್ದು, ದೇವಸ್ಥಾನಗಳಲ್ಲಿ ರಶ್ ಕಂಡುಬರುತ್ತಿದೆ.
ಧರ್ಮಸ್ಥಳದಲ್ಲಿ ರವಿವಾರ 40 ಸಾವಿರಕ್ಕೂ ಅಧಿಕ ಮಂದಿ ದೇವರ ದರ್ಶನ ಪಡೆದಿದ್ದಾರೆ. ಪಾರ್ಕಿಂಗ್ ಸ್ಥಳಗಳು ವಾಹನಗಳಿಂದ ತುಂಬಿದ್ದು, ವಸತಿಗೃಹಗಳಲ್ಲೂ ಹೆಚ್ಚಿನ ಜನಸಂದಣಿ ಕಂಡು ಬಂದಿತ್ತು. ಕ್ಷೇತ್ರದಲ್ಲಿ ಭಕ್ತರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ದೇವರ ದರ್ಶನ, ಅನ್ನಪ್ರಸಾದಕ್ಕೆ ವ್ಯವಸ್ಥೆ ಮಾಡಲಾಗಿತ್ತು.