Home ಧಾರ್ಮಿಕ ಸುದ್ದಿ ದೇವಾಲಯಗಳ ಪುಷ್ಕರಿಣಿ ಅಭಿವೃದ್ಧಿಗೆ ಅನುದಾನ: ಕೋಟ

ದೇವಾಲಯಗಳ ಪುಷ್ಕರಿಣಿ ಅಭಿವೃದ್ಧಿಗೆ ಅನುದಾನ: ಕೋಟ

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಕೆರೆ ಪರಿಶೀಲನೆ

2400
0
SHARE

ಪುತ್ತೂರು: ರಾಜ್ಯದ ವಿವಿಧ ದೇವಾಲಯಗಳಲ್ಲಿರುವ ಪುಷ್ಕರಿಣಿಗಳನ್ನು ಅಭಿವೃದ್ಧಿಯೊಂದಿಗೆ ವ್ಯವಸ್ಥಿತಗೊಳಿಸುವ ನಿಟ್ಟಿನಲ್ಲಿ ಧಾರ್ಮಿಕ ಪರಿಷತ್‌ ಚಿಂತನೆ ನಡೆಸಿದೆ. ಪುತ್ತೂರಿನ ಮುತ್ತು ಬೆಳೆದ ಶ್ರೀ ಮಹಾಲಿಂಗೇಶ್ವರ ದೇವಾಲಯದ ಕೆರೆಯ ಅಭಿವೃದ್ಧಿಗೂ ಅನುದಾನ ನೀಡಲಾಗುವುದು ಎಂದು ರಾಜ್ಯ ಮುಜರಾಯಿ ಸಚಿವ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಗುರುವಾರ ಬೆಳಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಅವರು ದೇವರ ದರ್ಶನ ಪಡೆದರು. ಬಳಿಕ ಶ್ರೀ ದೇವಾಲಯದ ಕೆರೆಯನ್ನು ಪರಿಶೀಲನೆ ನಡೆಸಿದರು.

ಪುತ್ತೂರು ಮಹಾಲಿಂಗೇಶ್ವರ ದೇವಾ ಲಯವು ಅಚ್ಚುಕಟ್ಟುತನ ಮತ್ತು ವಿಶೇಷ ಪರಂಪರೆಗೆ ಹೆಸರಾಗಿದೆ. ದೇವಾಲಯದ ಕೆರೆಯಲ್ಲಿ ಉತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ಧಾರ್ಮಿಕ ಮಹತ್ವ ಹೊಂದಿರುವ ಕೆರೆಯನ್ನು ರಾಜ್ಯ ಸರಕಾರದ ಅನುದಾನದಲ್ಲಿ ಅಭಿವೃದ್ಧಿಪಡಿಸ ಲಾಗುವುದು. ದೇವಾಲಯಗಳ ಪುಷ್ಕರಿಣಿ ಅಭಿವೃದ್ಧಿಗೆ ಸಂಬಂಧಿಸಿ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಲಾಗಿದ್ದು, ಮುಂದಿನ ಬಜೆಟ್‌ನಲ್ಲಿ ಈ ಕುರಿತ ನಿರ್ಧಾರ ಪ್ರಕಟಗೊಳ್ಳಲಿದೆ ಎಂದು ಹೇಳಿದರು.

ಸಾಮೂಹಿಕ ವಿವಾಹದ ದಿನದ ಚರ್ಚೆ
ಮುಜರಾಯಿ ಎ ಗ್ರೇಡ್‌ ದೇವಾಲಯಗಳಲ್ಲಿ ಸಾಮೂಹಿಕ ವಿವಾಹಕ್ಕೆ ಸಂಬಂಧಪಟ್ಟಂತೆ ಎರಡು ದಿನಾಂಕಗಳನ್ನು ನಿಗದಿಪಡಿಸಲಾಗಿದೆ. ಆದರೆ ಆಯಾ ಪ್ರದೇಶಗಳ ಆಚಾರ – ವಿಚಾರ ಮತ್ತು ಸಂಪ್ರದಾಯಗಳನ್ನು ಹೊಂದಿಕೊಂಡಂತೆ ತೀರ್ಮಾನಗಳನ್ನು ತೆಗೆದುಕೊಳ್ಳಬಹುದು. ಈ ಕುರಿತು ಚರ್ಚೆ ನಡೆಸಲಾಗುವುದು ಎಂದರು. ಮೇ 24ರಂದು ತುಳು ಸಂಪ್ರದಾಯದ ಪತ್ತನಾಜೆ ಇರುವುದರಿಂದ ಮದುವೆಯ ಕಾರ್ಯಗಳು ನಡೆಯುವುದಿಲ್ಲ ಎಂಬ ವಿಚಾರವನ್ನು ಶಾಸಕ ಸಂಜೀವ ಮಠಂದೂರು ನನ್ನ ಗಮನಕ್ಕೆ ತಂದಿದ್ದಾರೆ. ಆದಕಾರಣ ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ನಡೆಯುವ ಸಾಮೂಹಿಕ ವಿವಾಹಗಳಿಗೆ ಸಂಬಂಧಿ ಸಿದಂತೆ ದಿನಾಂಕಗಳ ನಿಗದಿ ಕುರಿತು ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ರಾಜ್ಯ ಮುಜರಾಯಿ, ಮೀನುಗಾರಿಕೆ ಮತ್ತು ಬಂದರು ಖಾತೆಯ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಶ್ರೀ ದೇವಾಲಯಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ದೇವಾಲಯದ ಹೊರಾಂಗಣ ಮತ್ತು ಒಳಾಂಗಣದಲ್ಲಿ ಸ್ವತ್ಛತೆಯನ್ನು ಕಾಯ್ದುಕೊಂಡ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವರು ಮೆಚ್ಚುಗೆ ಸೂಚಿಸಿದರು. ಭಕ್ತರಿಗೆ ಸೂಚನ ಫಲಕಗಳು, ಸೇವಾ ಕೌಂಟರ್‌ನಲ್ಲಿ ಸೇವೆಗಳ ವಿವರ, ಪ್ರಸಾದ ವಿತರಣೆಯ ವ್ಯವಸ್ಥೆ, ಆರತಿ ಸೇವೆಯ ವ್ಯವಸ್ಥೆ ಹಾಗೂ ವಿವಿಧ ಸೇವಾ ವ್ಯವಸ್ಥೆಗಳ ಕುರಿತಂತೆ ಸಚಿವರು ಮಾಹಿತಿ ಪಡೆದರು. ದೇವಾಲಯದ ವಾಸ್ತು ಶೈಲಿಯು ಅಪೂರ್ವವಾಗಿದೆ ಎಂದರು.

ಸಚಿವರ ಭೇಟಿಯ ಸಂದರ್ಭದಲ್ಲಿ ಶಾಸಕ ಸಂಜೀವ ಮಠಂದೂರು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್‌, ತಾ.ಪಂ. ಅಧ್ಯಕ್ಷ ರಾಧಾಕೃಷ್ಣ ಬೋರ್ಕರ್‌, ಪುತ್ತೂರು ಮಂಡಲ ಬಿಜೆಪಿ ನಿಯೋಜಿತ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲ ಬಿಜೆಪಿ ನಿಯೋಜಿತ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್‌ ರಾವ್‌, ಪ್ರಮುಖರಾದ ಆರ್‌.ಸಿ. ನಾರಾಯಣ, ವಿಶ್ವನಾಥ ಪರ್ಲಡ್ಕ, ದೇವಾಲಯದ ಆಡಳಿತಾಧಿಕಾರಿ ಲೋಕೇಶ್‌, ಕಾರ್ಯನಿರ್ವಹಣಾಧಿಕಾರಿ ನವೀನ್‌ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್‌ ಶೆಟ್ಟಿ ಉಪಸ್ಥಿತರಿದ್ದರು.

ಎ. 26ಕ್ಕೆ ವಿವಾಹ?
ಪುತ್ತೂರು ಜಾತ್ರೆ ಎ. 10ರಿಂದ 20ರ ತನಕ ನಡೆಯುವುದರಿಂದ ಸೀಮೆಯಲ್ಲಿ ಈ ಅವಧಿಯಲ್ಲಿ ಮಾತ್ರ ಯಾವುದೇ ಮಂಗಳ ಕಾರ್ಯಗಳನ್ನು ನಡೆಸುವ ಸಂಪ್ರದಾಯವಿಲ್ಲ. ಸಂಪ್ರದಾಯ ಎ. 10ರಿಂದ 19ರವರೆಗೆ ಮಾತ್ರ ಅನ್ವಯವಾಗುತ್ತದೆ. ಈ ವಿಚಾರವನ್ನು ಸಚಿವರ ಗಮನಕ್ಕೆ ತರಲಾಯಿತು. ಎ. 26ರಂದು ಶ್ರೀ ದೇವಾಲಯದಲ್ಲಿ ಉಚಿತ ಸಾಮೂಹಿಕ ವಿವಾಹ ನಡೆಸುವ ಕುರಿತು ಪರಿಶೀಲಿಸುವಂತೆ ಸಚಿವರು ಸೂಚಿಸಿದರು.

LEAVE A REPLY

Please enter your comment!
Please enter your name here