ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಪುರಾಣ ಪ್ರಸಿದ್ಧ ಮಹತೋಭಾರ ಕಾರಿಂಜ ಶ್ರೀ ಕಾರಿಂಜೇಶ್ವರ ದೇವಸ್ಥಾನದಲ್ಲಿ ಗುರುವಾರ ಆಟಿ ಅಮಾವಾಸ್ಯೆ ಪ್ರಯುಕ್ತ ತೀರ್ಥಸ್ನಾನ, ವಿಶೇಷ ಉತ್ಸವ ಜರಗಿತು.
ಕ್ಷೇತ್ರದ ಅರ್ಚಕರಾದ ಮಿಥುನ್ ಭಟ್ ಮತ್ತು ಜಯಶಂಕರ ಉಪಾಧ್ಯಾಯ ಅವರು ಪೂಜಾ ಕಾರ್ಯಗಳನ್ನು ನಡೆಸಿ ದರು. ಸಾವಿರಾರು ಭಕ್ತರು ಆಗಮಿಸಿ ಇಲ್ಲಿನ ಗದಾತೀರ್ಥ, ಉಂಗುಷ್ಠ ತೀರ್ಥ ಹಾಗೂ ಜಾನು ತೀರ್ಥಗಳೆಂಬ ಕೆರೆಗಳಲ್ಲಿ ತೀರ್ಥಸ್ನಾನ ಮಾಡಿ ಬಾಗಿನ ಅರ್ಪಿಸಿದರು. ಬಳಿಕ ಶ್ರೀ ಪಾರ್ವತೀ- ಪರಮೇಶ್ವರರನ್ನು ದರ್ಶಿಸಿ ಪ್ರಸಾದ ಸ್ವೀಕರಿಸಿದರು.
ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮಗಳು ಜರಗಿದವು. ಮುಂಜಾನೆ 3 ಗಂಟೆಯಿಂದ ದೇವರ ದರ್ಶನಕ್ಕೆ ಭಕ್ತರು ಆಗಮಿಸಿದ್ದಾರೆ. ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಮಾಜಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯ ಬಿ. ಪದ್ಮಶೇಖರ ಜೈನ್, ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್., ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಕಾವಳಪಡೂರು ಗ್ರಾ.ಪಂ. ಅಧ್ಯಕ್ಷ ಪ್ರಮೋದ್ ಕುಮಾರ್ ರೈ, ಮಾಜಿ ಅಧ್ಯಕ್ಷ ಮಾಣಿಕ್ಯರಾಜ್ ಜೈನ್ ಮೊದಲಾದವರು ಆಗಮಿಸಿದ್ದರು.
ಶ್ರೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಿ. ಜಿನರಾಜ ಆರಿಗ, ಸಮಿತಿ ಸದಸ್ಯರಾದ ಜನಾರ್ದನ ಆಚಾರ್ಯ ಬಾಳ್ತಬೈಲ್, ಸದಾಶಿವ ಪ್ರಭು, ಕೃಷ್ಣಪ್ಪ ಗೌಡ ತಾಳಿತ್ತೂಟ್ಟು, ವಿಶ್ವನಾಥ ಪೂಜಾರಿ ಪೀರ್ಯ, ವೆಂಕಪ್ಪ ನಾಯ್ಕ ಕಾರಿಂಜಬೈಲ್, ಸುಜಲಾ ಶೆಟ್ಟಿ, ಸವಿತಾ, ವ್ಯವಸ್ಥಾಪಕ ಸತೀಶ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.
ಧನಂಜಯ ಹೆಗ್ಡೆ, ಮೋಹನ್ ಭಟ್, ರಾಜ್ ಪ್ರಸಾದ್ ಆರಿಗ ಮತ್ತಿತರರು ಸಹಕರಿಸಿದರು. ಭಕ್ತರ ಸಂಖ್ಯೆ ಹೆಚ್ಚಾಗಿದ್ದುದರಿಂದ ವಾಹನ ದಟ್ಟಣೆ ಹೆಚ್ಚಾಗಿದ್ದು, ಬಂಟ್ವಾಳ ಗ್ರಾಮಾಂತರ ಮತ್ತು ಪುಂಜಾಲಕಟ್ಟೆ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ಕೈಗೊಂಡಿದ್ದರು.
ನವದಂಪತಿಗಳಿಂದ ಬಾಗಿನ
ಆಟಿ ಅಮಾವಾಸ್ಯೆ ಸಂದರ್ಭ ನವದಂಪತಿ ಬಾಗಿನ ಅರ್ಪಿಸಿದರೆ ದಾಂಪತ್ಯ ಚೆನ್ನಾಗಿರುವುದು ಮತ್ತು ತೀರ್ಥಸ್ನಾನದಿಂದ ಸರ್ವರೋಗ ಪರಿಹಾರ ಎಂಬ ಪ್ರತೀತಿ ಇರುವುದರಿಂದ ನವದಂಪತಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು, ಪುಣ್ಯಸ್ನಾನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.