ಪೊಳಲಿ: ಇತಿಹಾಸ ಪ್ರಸಿದ್ಧ ಪೊಳಲಿ ಶ್ರೀರಾಜರಾಜೇಶ್ವರಿ ದೇವಸ್ಥಾನದ ಜಾತ್ರೆಯ ಪ್ರಯುಕ್ತ ಐದು ದಿನಗಳ ಚೆಂಡು ಸಂಪನ್ನಗೊಂಡಿದೆ. ದೇವಸ್ಥಾನದ ಸಮೀಪದ ವಿಶಾಲ ಗದ್ದೆಯಲ್ಲಿ ಐದು ದಿನಗಳವರೆಗೆ ಚೆಂಡು ಉತ್ಸವ ನಡೆದಿದ್ದು, ನೂರಾರು ಮಂದಿ ಉತ್ಸಾಹಿ ತರುಣರು ಪಾಲ್ಗೊಂಡಿದ್ದರು.
ಅಮ್ಮುಂಜೆ ಹಾಗೂ ಮಣೇಲ್(ಮಳಲಿ) ಊರುಗಳ ಪರಂಪರಾಗತವಾಗಿ ಮಧ್ಯೆ ಚೆಂಡಾಟ ನಡೆಯುತ್ತಾ ಬಂದಿದೆ. ಚೆಂಡಾಟ ನಡೆದ ಬಳಿಕ ಉತ್ಸವ ಬಲಿ ನಡೆಯುತ್ತಿದ್ದು, ಇದಾದ ಬಳಿಕ ಆಯಾ ದಿನಗಳ ಚೆಂಡಿನ ದಿವಸ ಆಯಾ ರಥೋತ್ಸವ ಜರಗಿತು. ಕಡೇ ಚೆಂಡಿನ ದಿನ ಆಳುಪಲ್ಲಕಿ ರಥ, ಬೆಳ್ಳಿ ರಥೋತ್ಸವ ಜರಗಿತು. ಸುಬ್ರಹ್ಮಣ್ಯ ದೇವರ ಉತ್ಸವ ಮೂರ್ತಿ ಯನ್ನು ವಸಂತ ಮಂಟಪದಲ್ಲಿ ಪೂಜೆ ಬಳಿಕ ಪಲ್ಲಕಿ ಸೇವೆ, ಧಾರ್ಮಿಕ ಕಾರ್ಯಗಳು ಜರಗಿದವು.
ರಥೋತ್ಸವ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ಅಂಗವಾಗಿ ಗುರುವಾರ ಮಧ್ಯಾಹ್ನ ದೇವರ ಪೂಜೆ ನಡೆದ ಬಳಿಕ ರಥಕ್ಕೆ ಕಳಸ ಪೂಜೆ ನೆರವೇರಿತು. ದೇಗುಲದ ತಂತ್ರಿ ಸುಬ್ರಹ್ಮಣ್ಯ ನೇತೃತ್ವದಲ್ಲಿ ಪೂಜಾ ವಿಧಿವಿಧಾನಗಳು ನೆರವೇರಿದ ಅನಂತರ ಸುಬ್ರ ಹ್ಮಣ್ಯ ದೇವರ ಬಲಿ ಉತ್ಸವ ನೆರವೇರಿತು. ಅನಂತರ ರಥೋತ್ಸವ ಜರಗಿತು. ಉಳ್ಳಾಕ್ಲು ಮಂಗೃಂತಾಯಿ ದೈವಗಳ ನೇಮ ಈ ಬಾರಿ ಉಳ್ಳಾಕ್ಲು ಮಂಗೃಂತಾಯಿ ದೈವಗಳ ನೇಮ ಜರಗಲಿರುವುದು ವಿಶೇಷ.
ಬ್ರಹ್ಮಕಲಶೋತ್ಸವದಂದು ಇದು ನಡೆದಿದ್ದು, ಇನ್ನು ಪ್ರತೀವರ್ಷ ಜಾತ್ರೆಯ ದಿನದಂದು ಈ ದೈವಗಳ ನೇಮ ಜರಗಲಿದೆ. ಜಾತ್ರೆಯ ಸಂದರ್ಭ ಪೂರ್ವಕಟ್ಟಳೆಗೆ ಅನುಸಾರವಾಗಿ ಅರ್ಕುಳ ಬೀಡಿನಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಎ. 12ರಂದು ಧ್ವಜಾವರೋಹಣದ ದಿನ ಆಗಮಿಸಿ ರಾತ್ರಿ ನೇಮ ಸೇವೆ ಸಂಪನ್ನ ಗೊಳ್ಳಲಿದೆ. ಎ. 12ರಂದು ಅರ್ಕುಳ ಬೀಡಿನಿಂದ ಪುಂಚಮೆ ಮಾರ್ಗವಾಗಿ ಶ್ರೀ ಕ್ಷೇತ್ರ ಪೊಳಲಿ ಶೋಭಾಯಾತ್ರೆ ಜರಗಲಿದೆ.
“ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಅಲ್ಬಂ ಸಾಂಗ್ ಬಿಡುಗಡೆ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಾರ್ಷಿಕ ಜಾತ್ರೆಯ ನಿಮಿತ್ತ ಬುಧವಾರ “ಪುರಲ್ದಪ್ಪೆನ ಜಾತ್ರೆದ ಪೊರ್ಲು’ ಎಂಬ ಅಲ್ಬಂ ಸಾಂಗ್ ಅನ್ನು ಶಾಸಕ ರಾಜೇಶ್ ನಾೖಕ್ ಬಿಡುಗಡೆಗೊಳಿ ಸಿದ ರು. ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಸ್ವಾಮೀಜಿ ದೀಪ ಬೆಳಗಿಸಿದರು.
ಸ್ವಾಮಿ ಪ್ರಣವಾನಂದ ಸರಸ್ವತಿ, ಆಡಳಿತ ಮೊಕ್ತೇಸರ ಡಾ| ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ತಾರಾನಾಥ ಆಳ್ವ ಉಳಿಪಾಡಿಗುತ್ತು, ಪ್ರವೀಣ್, ಹರೀಶ್ಚಂದ್ರ, ಅರ್ಚಕ ರಾಮ್ ಭಟ್, ಪೊಳಲಿ ಗಿರೀಶ್ ತಂತ್ರಿ, ಲೀಲಾಕ್ಷ ಕರ್ಕೇರ, ಕದ್ರಿ ನವನೀತ್ ಶೆಟ್ಟಿ, ವೆಂಕಟೇಶ್ ನಾವಡ, ಭಾಸ್ಕರ ಭಟ್, ಕೃಷ್ಣಾನಂದ ಹೊಳ್ಳ, ರಿತೇಶ್, ಅಮ್ಮುಂಜೆ ಗುತ್ತು ದೇವ್ದಾಸ್ ಹೆಗ್ಡೆ, ರಂಗನಾಥ ಶೆಟ್ಟಿ, ಸುಬ್ರಾಯ ಕಾರಂತ್, ಪ್ರಶಾಂತ್ ಗುರುಪುರ, ಭರತ್ ಗುರುಪುರ ಹಾಗೂ ವಾಮನ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ದಿನೇಶ್ ರಾಯಿ ನಿರೂಪಿಸಿದರು.