ಶರವು ಕ್ಷೇತ್ರದಲ್ಲಿ ಹೊರೆಕಾಣಿಕೆ ಕೇಂದ್ರದ ಉದ್ಘಾಟನೆ
ಮಹಾನಗರ: ಪಂಜಿಮೊಗರು ರಾಘವೇಂದ್ರ ನಗರದಲ್ಲಿರುವ ಶ್ರೀ ಗುರು ರಾಘವೇಂದ್ರ ಮಠದ ಪುನಃ ಪ್ರತಿಷ್ಠೆ ಮತ್ತು ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಹೊರೆಕಾಣಿಕೆ ಕೇಂದ್ರದ ಉದ್ಘಾ ಟನೆ ರವಿವಾರ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.
ಮೇ 26ರಿಂದ 29ರ ವರೆಗೆ ಶ್ರೀ ಗುರುರಾಘವೇಂದ್ರ ಮಠದಲ್ಲಿ ಶ್ರೀಕೃಷ್ಣ, ಮುಖ್ಯಪ್ರಾಣ ದೇವರ ಹಾಗೂ ರಾಯರ ನೂತನ ವೃಂದಾವನ ಪುನಃ ಪ್ರತಿಷ್ಠಾಪನೆ, ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.
ಎಲ್ಲರೂ ಭಾಗಿಯಾಗಿ
ಹೊರೆಕಾಣಿಕೆ ಕೇಂದ್ರವನ್ನು ಉದ್ಘಾ ಟಿಸಿದ ಶರವು ಶ್ರೀ ಮಹಾಗಣಪತಿ ದೇವ ಸ್ಥಾನದ ಶಿಲೆಶಿಲೆ ಆಡಳಿತ ಮೊಕ್ತೇಸರ ಶರವು ಶ್ರೀ ರಾಘವೇಂದ್ರ ಶಾಸ್ತ್ರಿ ಮಾತನಾಡಿ, ಪಂಜಿಮೊಗರು ಗುರು ರಾಘವೇಂದ್ರ ಮಠ ಜೀರ್ಣೋದ್ಧಾರಗೊಂಡು ಬ್ರಹ್ಮಕಲಶಾ ಭಿಷೇಕ ನಡೆಯುತ್ತಿದ್ದು ನಿಜಕ್ಕೂ ನಮ್ಮೆಲ್ಲರಿಗೆ ಸಂತಸದ ವಿಚಾರ. ನಮ್ಮೆಲ್ಲರಿಗೂ ಇದೊಂದು ಸುಯೋಗ. ಅದರಲ್ಲಿ ಎಲ್ಲರೂ ಭಾಗಿಯಾಗಿ ದೇವರ ಕೃಪೆಗೆ ಪಾತ್ರರಾಗೋಣ.
ಅದೇ ರೀತಿ ಉಡುಪಿ ಶ್ರೀ ಕೃಷ್ಣ ದೇವರ ಸುವರ್ಣ ಗೋಪುರದ ಶಿಖರ ಪ್ರತಿಷ್ಠೆ, ಬ್ರಹ್ಮಕಲಶೋತ್ಸವದ ಪೂರ್ವ ಸಮಾರಂಭಕ್ಕೂ ಶ್ರೀ ಕ್ಷೇತ್ರದಲ್ಲಿ ಹೊರೆಕಾಣಿಕೆ ಸಂಗ್ರಹವಾಗುತ್ತಿದ್ದು, ಈ ಪುಣ್ಯ ಕಾರ್ಯದಲ್ಲಿ ಎಲ್ಲರೂ ಕೈಜೋಡಿಸಿ ಯಶಸ್ಸುಗೊಳಿಸೋಣ ಎಂದರು.
ಶ್ರೀ ಗುರುರಾಘವೇಂದ್ರ ಮಠದ ಬ್ರಹ್ಮಕಲಶೋತ್ಸವ ಸಮಿತಿ ಗೌರವ ಅಧ್ಯಕ್ಷ ಡಾ|ವಿ. ರವಿಚಂದ್ರನ್, ಇಂದಿರಾ ರವಿಚಂದ್ರನ್, ಕಾರ್ಯಾಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ಸಂಘಟನ ಕಾರ್ಯದರ್ಶಿ ಸುಧಾಕರ ರಾವ್ ಪೇಜಾವರ, ಪ್ರಚಾರ ಮತ್ತು ಮಾಧ್ಯಮ ಸಮಿತಿಯ ಪ್ರದೀಪ್ ಕುಮಾರ್ ಕಲ್ಕೂರ, ಜತೆ ಕಾರ್ಯದರ್ಶಿ ಗಣೇಶ್ ಭಟ್ ಶರವು ಉಪಸ್ಥಿತರಿದ್ದರು.
ಮೇ 25: ಹೊರೆಕಾಣಿಕೆ ಮೆರವಣಿಗೆ
ದೇವಸ್ಥಾನದಲ್ಲಿ ಸಂಗ್ರಹವಾದ ಹೊರೆಕಾಣಿಕೆಯ ಮೆರವಣಿಗೆ ಮೇ 25ರಂದು ಅಪರಾಹ್ನ 3ಗಂಟೆಗೆ ಶ್ರೀ ಕ್ಷೇತ್ರದಿಂದ ಹೊರಡಲಿದೆ. ಅಕ್ಕಿ, ಸಕ್ಕರೆ, ಬೆಲ್ಲ, ಪಾತ್ರೆಗಳು, ತರಕಾರಿ ಸೇರಿದಂತೆ ದಿನಸಿ ಸಾಮಾನುಗಳು ಹೊರೆಕಾಣಿಕೆ ಕೇಂದ್ರದಲ್ಲಿ ಸಂಗ್ರಹವಾಗಿದ್ದು, ಅಪರಾಹ್ನ 3 ಗಂಟೆಗೆ ಹೊರಟ ಮೆರವಣಿಗೆ 4ಗಂಟೆಗೆ ಕಾವೂರು ದೇವಸ್ಥಾನಕ್ಕೆ ತೆರಳಿ, ಅಲ್ಲಿಂದ ಪಂಜಿಮೊಗರು ರಾಘವೇಂದ್ರ ಮಠಕ್ಕೆ ಸಾಗಲಿದೆ. ಹೊರೆಕಾಣಿಕೆ ಅರ್ಪಿಸುವವರು ಮೇ 25ರೊಳಗೆ ತಲುಪಿಸಬೇಕು ಎಂದು ಗಣೇಶ್ ಭಟ್ ಶರವು ತಿಳಿಸಿದ್ದಾರೆ.