ಪಡುಬಿದ್ರಿ : ಗೌಡಸಾರಸ್ವತ ಸಮಾಜಕ್ಕೊಳಪಟ್ಟಿರುವ ಪಡುಬಿದ್ರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇಗುಲದ ವರ್ಷಾವಧಿ ಜಾತ್ರಾ ಮಹೋತ್ಸವ ಪ್ರಯುಕ್ತ ದೇಗುಲಕ್ಕೆ ಚೇಂಪಿಯ ಮೊಕ್ಕಾಂನಿಂದ ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಶ್ರೀಪಾದರು ಎ. 19ರಂದು ಭೇಟಿ ನೀಡಿದರು.
ದೇಗುಲಕ್ಕೆ ಆಗಮಿಸಿದ ಶ್ರೀಪಾದರನ್ನು ಪಡುಬಿದ್ರಿಯ ಗೌಡಸಾರಸ್ವತ ಬ್ರಾಹ್ಮಣರ ವತಿಯಿಂದ ಸ್ವಾಗತಿಸಲಾಯಿತು. ಬಳಿಕ ಶ್ರೀ ಲಕ್ಷ್ಮೀ ವೆಂಕಟರಮಣ ಸಪರಿವಾರ ದೇವರ ದರ್ಶನಗೈದ ಶ್ರೀಪಾದರನ್ನು ಸಭಾಭವನಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ಜಿಎಸ್ಬಿ ಸಮಾಜ, ದೇವಸ್ಥಾನದ ಆಡಳಿತ ಮಂಡಳಿಯ ಪರವಾಗಿ ಶ್ರೀಪಾದರಿಗೆ ಗೌರವವನ್ನು ಆಡಳಿತ ಮೊಕ್ತೇಸರ ಪ್ರಶಾಂತ್ ಶೆಣೈ ದಂಪತಿ ನೆರವೇರಿಸಿದರು.
ಶ್ರೀ ಸಂಯಮೀಂದ್ರತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ದೇವಸ್ಥಾನದಲ್ಲಿ ಯಜ್ಞ, ಯಾಗ, ರಥೋತ್ಸವ ಮೊದಲಾದ ಮಹೋತ್ಸವಗಳಿಂದ ಶ್ರೀ ದೇವರ ಸಾನ್ನಿಧ್ಯ ವೃದ್ಧಿಯಾಗುವುದು. ಶ್ರೀದೇವರ ಸಾನ್ನಿಧ್ಯ ವೃದ್ಧಿಯಿಂದಾಗಿ ಭಗವದ್ಭಕ್ತರಿಗೆ ಶ್ರೀ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂದರು.
ಶ್ರೀ ದೇಗುಲದ ಆಡಳಿತ ಮಂಡಳಿಯ ಸದಾಶಿವ ಶೆಣೈ ಸ್ವಾಗತಿಸಿದರು. ವೇ| ಮೂ| ಸಚ್ಚಿದಾನಂದ ಶರ್ಮ ಪ್ರಾಸ್ತಾವಿಸಿದರು. ಆಡಳಿತ ಮಂಡಳಿ ಸದಸ್ಯರು, ಭಜಕರು ಉಪಸ್ಥಿತರಿದ್ದರು.