ಕುಂದಾಪುರ: ಹಿರಿಯರಿಗೆ, ಗುರುಗಳಿಗೆ ದ್ರವ್ಯಮದ, ಅಧಿಕಾರ ಮದ, ವಯೋಮದದಲ್ಲಿ ದ್ರೋಹ ಬಗೆದರೆ 60
ಸಾವಿರ ವರ್ಷಗಳ ಕಾಲ ಕ್ರಿಮನಿಯಾಗಿ ಹುಟ್ಟುತ್ತಾನೆ ಎನ್ನುತ್ತದೆ ಶಾಸ್ತ್ರ. ಭಗವಂತ ಎಷ್ಟು ಕರುಣಾ ಸಮುದ್ರನೋ ಅಷ್ಟೇ ಕಠಿನನೂ ಆಗಿದ್ದಾನೆ. ಆದ್ದರಿಂದ ಧರ್ಮದ ಕುರಿತು ಉದಾಸೀನ ಸಲ್ಲದು ಎಂದು ವ್ಯಾಸರಾಜ ಮಠದ ಗಾಣಿಗ ಸಮಾಜದ ಕುಲಗುರು ಶ್ರೀ ಲಕ್ಷ್ಮೀಂದ್ರತೀರ್ಥ ಸ್ವಾಮೀಜಿ ನುಡಿದರು.
ಅವರು ಸೋಮವಾರ ಕುಂದಾಪುರದ ವ್ಯಾಸರಾಜ ಮಠದಲ್ಲಿ ಚಾತುರ್ಮಾಸ್ಯ ವ್ರತ ಸಮಾಪನ ಸಂದರ್ಭ ಆಶೀರ್ವಚನ
ನೀಡಿದರು. ಕೃಷ್ಣನ ಕುರಿತು, ಆತನ ಮಹಾತ್ಮೆಗಳ ಕುರಿತು ಅರಿತುಕೊಂಡಷ್ಟೂ ಭಕ್ತಿ ಹುಟ್ಟುತ್ತದೆ. ಭಕ್ತಿಯ ಪರಾಕಾಷ್ಠೆ ಮುಟ್ಟಿದರೆ ಸ್ವಾಮಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ. ಶಾಶ್ವತ ಮೋಕ್ಷಕ್ಕೂ ಪರಮಭಕ್ತಿ ಅಗತ್ಯವಿದೆ. ಅಂತಹ ಪರಮಭಕ್ತಿಗೆ ಎಷ್ಟೋ ಜನ್ಮಗಳು ಬೇಕು. ಶಾಸ್ತ್ರ ಹಾಗೂ ಧರ್ಮದ ಅಡಿಯಲ್ಲಿ ನಾವು ಬದುಕಿದರೆ ಮೋಕ್ಷಪಥದೆಡೆಗೆ ಸಾಗಬಹುದು. ಶಾಸ್ತ್ರ ಕಠಿನವಾಗಿದೆ.
ಅಂತೆಯೇ ಸುಲಭವಾಗಿಯೂ ಇದೆ. ನಾವು ಮಾಡುವ ತಪ್ಪುಗಳಿಗೆ ಶಿಕ್ಷೆಯೇ ಕೊಡುತ್ತಾ ಹೋದರೆ ನಮ್ಮ ಉತ್ಥಾನ ಸಾಧ್ಯವಿಲ್ಲ. ಅಷ್ಟು ಪಾಪಗಳನ್ನು ನಾವು ದಿನವಹಿ ಮಾಡುತ್ತೇವೆ. ಆದರೆ ಭಕ್ತ ಪರಾಧೀನನಾದ ಭಗವಂತ ಕೆಲವು ತಪ್ಪುಗಳಿಗೆ ಮಾತ್ರ ಶಿಕ್ಷೆ ಕೊಡುತ್ತಾನೆ ಎಂದರು.
ಕುಂದಾಪುರ ತಾಲೂಕು ಗಾಣಿಗ ಸೇವಾ ಸಂಘದ ಅಧ್ಯಕ್ಷ ಕೊಗ್ಗ ಗಾಣಿಗ, ಪ್ರಧಾನ ಕಾರ್ಯದರ್ಶಿ ಕೆ. ಭಾಸ್ಕರ, ಕೋಶಾಧಿಕಾರಿ ಪರಮೇಶ್ವರ ಜಿ.ಬಿ., ವ್ಯಾಸರಾಜ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಎಂ. ಲಕ್ಷ್ಮಣ, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಗಾಣಿಗ ಕನ್ಯಾನ, ಕೋಶಾಧಿಕಾರಿ ಗಣಪಯ್ಯ
ಗಾಣಿಗ ಉಪ್ಪುಂದ, ಪ್ರಧಾನ ಅರ್ಚಕ ವಿಜಯ ಪೆಜತ್ತಾಯ ಮೊದಲಾದವರು ಉಪಸ್ಥಿತರಿದ್ದರು.
ಸುಮಾರು 300 ವರ್ಷಗಳ ಇತಿಹಾಸ ದಲ್ಲಿಯೇ ಮೂಲ ಮಠದಲ್ಲಿ ಶ್ರೀಗಳು ಚಾತುರ್ಮಾಸ್ಯ ಕೈಗೊಳ್ಳುತ್ತಿರುವುದು ಇದೇ ಪ್ರಥಮ. ಚಾತುರ್ಮಾಸ್ಯ ವ್ರತಸಂದರ್ಭ ವಿವಿಧ ಧಾರ್ಮಿಕ ಕಾರ್ಯ ಕ್ರಮಗಳು ದಿನಂಪ್ರತಿ ನಡೆದಿದ್ದು ಸೋಮವಾರ ವ್ರತದ ಸಮಾಪನ ನಡೆಯಿತು.