ನಿಡ್ಪಳ್ಳಿ: ನಿಡ್ಪಳ್ಳಿ ಶ್ರೀ ಶಾಂತಾದುರ್ಗಾ ದೇವಾಲಯ ಹಾಗೂ ಪೂಮಾಣಿ ಕಿನ್ನಿಮಾಣಿ ಮತ್ತು ಪರಿವಾರ ದೈವಗಳ ಜೀರ್ಣೋದ್ಧಾರ ಕೆಲಸ ಅಂತಿಮ ಹಂತ ತಲುಪುತ್ತಿದ್ದು, ಬರುವ ಮಾರ್ಚ್ ತಿಂಗಳಲ್ಲಿ ನಡೆಯುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳ ಬಗ್ಗೆ ಪೂರ್ವಭಾವಿ ಸಭೆಯು ಜ. 20ರಂದು ದೇವಾಲಯದ ವಠಾರದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರಮುಖ ನಿರ್ಣಯಗಳು
ಬಾಕಿ ಉಳಿದ ಜೀರ್ಣೋದ್ಧಾರ ಕೆಲಸವನ್ನು ಬೇಗನೆ ಪೂರ್ತಿಗೊಳಿಸುವುದು. ನಿಧಿ ಸಂಗ್ರಹ, ಬ್ರಹ್ಮಕಲಶೋತ್ಸವದ ಚಪ್ಪರ ಮುಹೂರ್ತ ಜ. 27ರಂದು ನಡೆಸಲು ನಿರ್ಣಯ. ಅಂದು ಎಲ್ಲ ಸಮಿತಿಯ ಸದಸ್ಯರು ಸೇರಿ ಕಾರ್ಯಕ್ರಮದ ತಯಾರಿ ಬಗ್ಗೆ ಸಮಾಲೋಚಿಸಿ ತೀರ್ಮಾ ನಿಸಲು ನಿರ್ಣಯಿಸಲಾಯಿತು. ಬ್ರಹ್ಮಕಲ ಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಫೆ. 3ರಂದು ಬಿಡುಗಡೆ ಮಾಡಲು ದಿನಾಂಕ ನಿಗದಿಗೊಳಿಸಲಾಯಿತು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಪ್ರಮೋದ್ ಕುಮಾರ್ ಆರಿಗ, ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು, ಅಧ್ಯಕ್ಷ ಪದ್ಮನಾಭ ಬೋರ್ಕರ್, ಉಪಾಧ್ಯಕ್ಷರಾದ ಶಂಕರನಾರಾಯಣ ಭಟ್, ಶಿವಪ್ಪ ಪೂಜಾರಿ ನುಳಿಯಾಲು, ಕಾರ್ಯದರ್ಶಿ ನಾಗೇಶ ಗೌಡ, ಕೋಶಾಧಿಕಾರಿ ತಿಮ್ಮಣ್ಣ ರೈ ಆನಾಜೆ, ಜತೆ ಕಾರ್ಯದರ್ಶಿ ಶ್ರೀನಿವಾಸ ಭಟ್ ವಾಲ್ತಾಜೆ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರು, ಭಕ್ತರು ಉಪಸ್ಥಿತರಿದ್ದರು.