ಬೆಳ್ತಂಗಡಿ : ಮುಂಡಾಜೆ ಭಾರ್ಗವನಗರದ ಸನ್ಯಾಸಿಕಟ್ಟೆ ಶ್ರೀ ಪರಶುರಾಮ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ದೇವಸ್ಥಾನದಲ್ಲಿ ಪ್ರತಿಷ್ಠಾಪನೆಗೊಳ್ಳ ಲಿರುವ ಶ್ರೀ ಪರಶುರಾಮ ದೇವರು ಹಾಗೂ ಶ್ರೀ ಅನ್ನಪೂರ್ಣೇಶ್ವರೀ ಅಮ್ಮನವರ ಶಿಲಾ ವಿಗ್ರಹಗಳ ಮೆರವಣಿಗೆಯು ರವಿವಾರ ಸಂಜೆ ಸೋಮಂತ್ತಡ್ಕ ಹಳೆ ಅಂಚೆ ಕಚೇರಿ ಬಳಿಯಿಂದ ಮುಂಡಾಜೆ ದೇವಸ್ಥಾನದವರೆಗೆ ನಡೆಯಿತು.
ಈ ಸಂದರ್ಭ ಊರವರು, ದೇವಸ್ಥಾನದ ಆಡಳಿತ ಮಂಡಳಿಯವರು, ಜೀರ್ಣೋದ್ಧಾರ ಸಮಿತಿಯವರು, ಬ್ರಹ್ಮಕಲಶೋತ್ಸವ ಸಮಿತಿಯ ಪದಾಧಿಕಾರಿಗಳು, ಭಕ್ತರು ಭಾಗವಹಿಸಿದ್ದರು.
ಎ. 18ರಿಂದ ಎ. 20ರ ವರೆಗೆ ವೇ| ಮೂ| ಅಗ್ನಿಮಾನ್ ತಲಾರೆ ಶ್ರೀ ವಾಮನ ಭಟ್ಟರ ನೇತೃತ್ವದಲ್ಲಿ ಶ್ರೀ ಪರಶುರಾಮ ದೇವರು, ಶ್ರೀ ಸಿದ್ಧಿವಿನಾಯಕ ದೇವರು ಹಾಗೂ ನವಗ್ರಹಗಳ ಪುನಃಪ್ರತಿಷ್ಠೆ ಮತ್ತು ಶ್ರೀ ಅನ್ನಪೂರ್ಣೇಶ್ವರೀ ದೇವರ ಪ್ರತಿಷ್ಠೆ ಮತ್ತು ಬ್ರಹ್ಮಕಲಶವು ವಿವಿಧ ತಾಂತ್ರಿಕ, ವೈದಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.