ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸಂಭ್ರಮದ ಮಂಗಳೂರು ದಸರಾಕ್ಕೆ ಮುನ್ನುಡಿಯಾಗಿ ರವಿವಾರ ಬೆಳಗ್ಗೆ ದೇವಸ್ಥಾನದ ಗೋಕರ್ಣನಾಥ ಕಲ್ಯಾಣ ಮಂಟಪದ ದರ್ಬಾರು ಮಂಟಪದಲ್ಲಿ ಶ್ರೀ ಶಾರದಾ ಮಾತೆ, ಮಹಾಗಣಪತಿ ಸಹಿತ ನವದುರ್ಗೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು.
ಮಂಗಳೂರು ಪೊಲೀಸ್ ಆಯುಕ್ತ ಡಾ| ಪಿ.ಎಸ್. ಹರ್ಷ ಅವರು ಉತ್ಸವಕ್ಕೆ ಚಾಲನೆ ನೀಡಿದರು. ಮೈಸೂರು ದಸರಾ ಮಾದರಿಯಲ್ಲಿ ಮಂಗಳೂರು ದಸರಾ ಮಹೋತ್ಸವ ಅತ್ಯಂತ ವಿಶಿಷ್ಟ, ವಿಭಿನ್ನ ಆಚರಣೆ. ಧಾರ್ಮಿಕ, ಸಾಂಸ್ಕೃತಿಕ ಮತ್ತು ಕಲಾವೈಭವಗಳು ಶ್ರೀ ಕ್ಷೇತ್ರದಲ್ಲಿ ಸಾಕಾರವಾಗಿವೆ. ಮಂಗಳೂರು ದಸರಾ ಮೂಲಕ ನಾಡಿಗೆ ಶಾಂತಿ, ನೆಮ್ಮದಿಯನ್ನು ಶ್ರೀಮಾತೆಯು ಕರಣಿಸಲಿ ಎಂದರು.
ಶೋಭಿಸುವ ನವದುರ್ಗೆಯರು
ಶ್ರೀ ಶಾರದಾ ಮಾತೆಯೊಂದಿಗೆ ನವದುರ್ಗೆಯರ ಆರಾಧನೆ ಇಲ್ಲಿನ ವೈಶಿಷ್ಟ್ಯ . ಶ್ರೀ ಶಾರದಾ ಮಾತೆ, ಆದಿಶಕ್ತಿಯೊಂದಿಗೆ ನವರಾತ್ರಿಯ ಒಂಬತ್ತು ದಿನಗಳಲ್ಲಿ ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರ ಘಂಟಾ, ಕೂಷ್ಮಾಂಡಿನಿ, ಸ್ಕಂದಮಾತಾ,ಕಾತ್ಯಾಯಿನಿ, ಮಹಾಕಾಳಿ, ಮಹಾ ಗೌರಿ, ಸಿದ್ಧಿಧಾತ್ರಿ ದೇವಿಯರನ್ನು ವಿಗ್ರಹ ರೂಪದಲ್ಲಿ ಆರಾಧಿಸಲಾಗುತ್ತದೆ. ಜತೆಗೆ ಮಹಾಗಣಪತಿಯನ್ನು ಪ್ರತಿಷ್ಠಾಪಿಸ ಲಾಗಿದೆ. ಆರಂಭದಲ್ಲಿ ಶಾರದಾ ಮಾತೆಯ ವಿಗ್ರಹದ ಕ್ಷೇತ್ರ ಪ್ರದಕ್ಷಿಣೆ ನಡೆದು 11.20ರ ಸುಮಾರಿಗೆ ಪ್ರತಿಷ್ಠಾಪನೆ ನೆರವೇರಿತು.
ಜಗಮಗಿಸುತ್ತಿದೆ ಮಂಗಳೂರು
ವೈಭವೋಪೇತ ಮಂಗಳೂರು ದಸರಾ ಸಡಗರಕ್ಕೆ ನಗರ ಶೃಂಗಾರಗೊಂಡಿದೆ. ಪ್ರಮುಖ ಬೀದಿಗಳು ವರ್ಣಮಯ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಜಗಮಗಿಸುತ್ತಿವೆ. ಅ. 9ರ ವರೆಗೆ 10 ದಿನಗಳ ಕಾಲ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈಭವ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ನಡೆಯಲಿದೆ. ಶಾರದಾ ಮಾತೆ ಸಹಿತ ನವದುರ್ಗೆಯರನ್ನು ಪ್ರತಿಷ್ಠಾಪಿಸಲಾಗಿರುವ ಶ್ರೀ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪವನ್ನು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಈ ಬಾರಿ ಶ್ರೀ ಕ್ಷೇತ್ರದ ಗೋಡೆಗಳಿಗೆ ಸ್ವರ್ಣ ವರ್ಣವನ್ನು ಲೇಪಿಸಿರುವುದು ವಿಶೇಷ. ಮಂಗಳೂರು ದಸರಾದ ಭವ್ಯ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ನಡೆಯಲಿದೆ. ಈ ಬಾರಿ ಯಾತ್ರೆಯಲ್ಲಿ ಶಾರದಾ ಮಾತೆಯ ವಿಗ್ರಹ ಮುಂಚೂಣಿಯಲ್ಲಿರುತ್ತದೆ. ಬಳಿಕ ಇತರ ಟ್ಯಾಬ್ಲೋಗಳು ಸಂಚರಿಸಲಿವೆ.