ಪುತ್ತೂರು : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗ ಭವ್ಯ ರಾಜಗೋಪುರ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಮಾ. 25ರಂದು ಉದ್ಘಾಟನೆಗೊಳ್ಳಲಿದೆ ಎಂದು ದೇಗುಲ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್. ಸುಧಾಕರ ಶೆಟ್ಟಿ ಅವರು ಹೇಳಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುತ್ತೂರು ಶ್ರೀ ಮಹಾ ಲಿಂಗೇಶ್ವರ ದೇವಸ್ಥಾನಕ್ಕೆ 800 ವರ್ಷ ಗಳ ಇತಿಹಾಸವಿದೆ. ದೇವಸ್ಥಾನದ ಮುಂಭಾಗ ಮೊದಲ ಬಾರಿಗೆ ರಾಜಗೋಪುರ ನಿರ್ಮಿಸ ಲಾಗಿದೆ. ಹತ್ತು ತಿಂಗಳಲ್ಲಿ 1.25 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಗೋಪುರಕ್ಕೆ ಭಕ್ತರು ದೇಣಿಗೆ ನೀಡಿದ್ದಾರೆ. ತಮಿಳುನಾಡಿನ ಖ್ಯಾತ ಸ್ತಪತಿ ಶೇಖರ್ ಅವರ ವಾಸ್ತು ವಿನ್ಯಾಸ ಮಾರ್ಗದರ್ಶನದಂತೆ ನಿರ್ಮಾಣ ಕಾರ್ಯ ನಡೆದಿದೆ ಎಂದರು.
ದೇವಸ್ಥಾನದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ನಾನಾ ವೈದಿಕ ಕಾರ್ಯಕ್ರಮ ನಡೆಯಲಿವೆ. ಮಾ. 24ರಂದು ಸಂಜೆ 7 ಗಂಟೆಯಿಂದ ದೇವತಾ ಪ್ರಾರ್ಥನೆ, ಆಚಾರ್ಯವರಣ, ಪುಣ್ಯಾಹವಾಚನ, ಸ್ಥಳ ಶುದ್ಧಿ, ಪ್ರಾಸಾದ ಶುದ್ಧಿ, ರಾಕ್ಷೋಘ್ನ ಹವನ, ವಾಸ್ತು ಹೋಮ, ವಾಸ್ತು ಬಲಿ, ವಾಸ್ತು ಪುಣ್ಯಾಹ, ಸುದರ್ಶನ ಹವನ, ಮಂಟಪ ನಮಸ್ಕಾರ, ಸಹಸ್ರ ಕಲಶಪೂಜೆ, ಪರಿಕಲಶ ಪೂಜೆ, ಕುಂಭೇಶ ಕರ್ಕರೀ ಪೂಜೆ, ಅಧಿವಾಸ ಹವನ, ಅಧಿವಾಸ ಬಲಿ, ಕಲಶಾ ವಾಸ ನಡೆಯಲಿದೆ. ಸಂಜೆ 6ರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಮಾ. 25ರಂದು ಬೆಳಗ್ಗೆ 7ರಿಂದ ಗಣಪತಿ ಹವನ, ಸಹಸ್ರ ಕಲಶಾಭಿಷೇಕ ನಡೆಯಲಿದೆ.