ಕಟಪಾಡಿ: ನಮ್ಮ ಕಲ್ಚರ್ ಎಗ್ರಿಕಲ್ಚರ್ ಆಗಿರಲಿ ಎಂದು ಶ್ರೀ ಕ್ಷೇತ್ರ ಕೇಮಾರು ಶ್ರೀ ಸಾಂದೀಪನಿ ಆಶ್ರಮದ ಶ್ರೀ ಈಶ ವಿಟ್ಠಲದಾಸ ಸ್ವಾಮೀಜಿ ಹೇಳಿದರು. ಮಂಗಳವಾರ ಉದ್ಯಾವರ ಪಡುಕರೆ ಕನಕೋಡ ಶ್ರೀ ಪಂಡರೀನಾಥ ಭಜನ ಮಂದಿರದ 80ರ ಸಂಭ್ರಮದ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ರೈತನ ತಪಸ್ಸು ನಮ್ಮ ಹೊಟ್ಟೆ ತುಂಬಿಸುತ್ತದೆಯೇ ಹೊರತು ಯಾವುದೇ ಐಟಿ-ಬಿಟಿಯಲ್ಲ. ಕೃಷಿಯಿಂದ ವಿಮುಖರಾದ ನಾವು ಮಾರುಕಟ್ಟೆ ಅವಲಂಬಿತ ಜೀವನ ಪದ್ಧತಿಗೆ ಒಗ್ಗಿಕೊಂಡಿದ್ದೇವೆ. ಎಂದಿದ್ದರೂ ನಮ್ಮ ಸಂಸ್ಕೃತಿ ಕೃಷಿ ಸಂಸ್ಕೃತಿಯೇ ಆಗಿರುತ್ತದೆ ಎಂದರು.
ಬದಲಾದ ಕಾಲ ಘಟ್ಟದಲ್ಲಿ ಯುವಪೀಳಿಗೆಗೆ ಸಿನೆಮಾ ನಟರು, ಕ್ರಿಕೆಟಿಗರು ಆದರ್ಶರಾಗುತ್ತಿದ್ದಾರೆ. ಆದರೆ ರೈತರು, ಕೃಷಿಕರು, ಯೋಧರೇ ನಮ್ಮ ನಿಜವಾದ ರೋಲ್ ಮಾಡೆಲ್. ಮಾತೆಯ ಮಡಿಲು, ವಿದ್ಯೆ-ಸಂಸ್ಕಾರ-ಸಂಸ್ಕೃತಿಯ ತೊಟ್ಟಿಲು. ಭಗವತ್ ಭಕ್ತಿಗಿಂತ ಮಾತೃಭಕ್ತಿಯೇ ಶ್ರೇಷ್ಠ. ಹಾಗಾಗಿ ಮನೆ ಮನೆಯಲ್ಲಿ ಮನೋ ವಿಜ್ಞಾನವಾದ ಭಗವದ್ಗೀತೆಯ ಉಪಾಸನೆ ಆಗಬೇಕಿದೆ ಎಂಬ ಅಭಿಲಾಷೆ ವ್ಯಕ್ತಪಡಿಸಿದರು.
ಪಂಡರಿನಾಥ ಭಜನ ಮಂದಿರದ ಉಪಾಧ್ಯಕ್ಷ ಜನಾರ್ದನ ಸುವರ್ಣ, ಮಾಜಿ ಅಧ್ಯಕ್ಷ ಶಿವರಾಮ್ ಪುತ್ರನ್, ಪಂಡರಿನಾಥ ಮೊಗವೀರ ಮಾತೃಮಂಡಳಿಯ ಕಾರ್ಯದರ್ಶಿ ರಾಧಿಕಾ ಉಮೇಶ್, 80ರ ಸಂಭ್ರಮ -ಬ್ರಹ್ಮಕಲಶೋತ್ಸವ ಸಮಿತಿಯ ಸಲಹೆಗಾರ ರಮೇಶ್ ಸುವರ್ಣ ಉಪಸ್ಥಿತರಿದ್ದರು. ಭಜನ ಮಂದಿರದ ಮಾಜಿ ಅಧ್ಯಕ್ಷ ಕೃಷ್ಣ ಜಿ. ಕೋಟ್ಯಾನ್ ಸ್ವಾಗತಿಸಿ, ವಂದಿಸಿದರು.
ಮಂದಿರಗಳು ಧಾರ್ಮಿಕ ಶಿಕ್ಷಣ ನೀಡುವಂತಾಗಲಿ
ಮನುಷ್ಯ ಚಿಂತನೆಯಿಂದ ಮಾತ್ರ ಬೆಳೆಯುತ್ತಾನೆ. ಹಾಗಾಗಿ ಜೀವನಕ್ಕೆ ಕಲಿಕೆಯ ಸರ್ಟಿಫಿಕೇಟ್ ಗಿಂತ ಜೀವನದ ಸರ್ಟಿಫಿಕೇಟ್ ಅವಶ್ಯ. ಆದಕ್ಕಾಗಿ ಮೊಬೈಲ್ವುಯ ಪ್ರಪಂಚದಿಂದ ನಾವು ಪಾರಾಗಬೇಕು. ಸಾಧನಾಮಯ ಜೀವನ ನಮ್ಮದಾಗಬೇಕು. ಮಂದಿರಗಳು ನೊಂದ ಜನರಿಗೆ ನೆಮ್ಮದಿ ಕೊಡುವ ಜತೆಗೆ ಧಾರ್ಮಿಕ ಶಿಕ್ಷಣ ನೀಡುವ ಕೇಂದ್ರಗಳಾಗಬೇಕು.
– ಕೇಮಾರು ಶ್ರೀ