ವಿಟ್ಲಮುಟ್ನೂರು : ಕುಳ ವಿಟ್ಲ ಮುಟ್ನೂರು ಗ್ರಾಮದ ಕುಂಡಡ್ಕ ವಿಷ್ಣುನಗರ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ, ವಿಟ್ಲಮುಟ್ನೂರು ಗ್ರಾಮದ ಮಾಡತ್ತಡ್ಕ ಶಿಬರಿಕಲ್ಲ ಮಾಡ ಶ್ರೀ ಮಲರಾಯ ಮೂವರ್ ದೈವಂಗಳ್ ಜೀರ್ಣೋದ್ಧಾರ – ಬ್ರಹ್ಮಕಲಶ ಸಮಿತಿ ವತಿಯಿಂದ ಬ್ರಹ್ಮಕಲಶ, ಸ್ಥಾನ ಪ್ರದಾನ ಕಾರ್ಯಕ್ರಮದ ಬಳಿಕ ಶುಕ್ರವಾರ ದೃಢಕಲಶಾಭಿಷೇಕ ನೆರವೇರಿಸಲಾಯಿತು. ಬೆಳಗ್ಗೆ ಗಣಪತಿ ಹವನ, ಕಲಶ ಪ್ರತಿಷ್ಠೆ, ಕಲಶಾಂಗ ಹವನ, ದೃಢಕಲಶಾಭಿಷೇಕ, ಮಹಾಪೂಜೆ, ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ಇದೇ ಸಂದರ್ಭ ನಡೆದ ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆಯ ಪ್ರತಿನಿಧಿ ನಂದ ವರ್ಮ ಅರಸರು ಅಧ್ಯಕ್ಷತೆ ವಹಿಸಿ, ಗ್ರಾಮಸ್ಥರು ಒಗ್ಗಟ್ಟಲ್ಲಿ ಶ್ರಮಿಸಿ, ದೇಗುಲ, ದೈವಸ್ಥಾನ, ಭಂಡಾರದ ಮನೆಗಳನ್ನು ಪುನರ್ ನಿರ್ಮಾಣ ಮಾಡಿ ರುವುದು ಶ್ರೇಷ್ಠ ಕಾರ್ಯ. ಇಲ್ಲಿನ ಈ ಕಾರ್ಯ ಊರ-ಪರವೂರುಗಳಲ್ಲಿ ಪ್ರಸಿದ್ಧಿ ಹೊಂದಿದೆ ಎಂದು ಶ್ಲಾಘಿಸಿದರು.
ಮನೆತನಗಳ ಪ್ರತಿನಿಧಿಗಳಾದ ಯೋಗೀಶ್ ಕುಡ್ವ, ರವೀಂದ್ರ ಅಡ್ಯಂ ತಾಯ, ಬ್ರಹ್ಮಕಲಶ ಸಮಿತಿ ಪ್ರ.ಕಾರ್ಯ ದರ್ಶಿ ವೇಣುಗೋಪಾಲ ಶೆಟ್ಟಿ ಮರುವಾಳ, ಕೋಶಾಧಿಕಾರಿ ಗೋವಿಂದರಾಜ್, ಸಂಘ ಟನ ಕಾರ್ಯದರ್ಶಿ ದಯಾನಂದ ಶೆಟ್ಟಿ ಉಜಿರೆಮಾರು ಉಪಸ್ಥಿತರಿದ್ದರು. ಸ್ಥಳದಾನಿ ಸುಲೈಮಾನ್, ಲಲಿತಾ ಆಚಾರ್ಯ ಮತ್ತಿತರರನ್ನು ಸಮ್ಮಾನಿಸಲಾಯಿತು.
ಚಿದಾನಂದ ಪೆಲತ್ತಿಂಜ ಸ್ವಾಗತಿಸಿದರು. ಜಯಕರ ಅಮೈ, ತಿಮ್ಮಪ್ಪ, ಶ್ರೀಪತಿ ನಾಯಕ್ ನಿರೂಪಿಸಿದರು. ಹರೀಶ್ ನೀರಕೋಡಿ ವಂದಿಸಿದರು.
ಭಕ್ತರ ಸಹಕಾರ ಅಗತ್ಯ
ಬ್ರಹ್ಮಕಲಶ ಸಮಿತಿ ಅಧ್ಯಕ್ಷ ನೂಜಿ ಕರ್ಗಲ್ಲು ಮನೆತನದ ಗುರಿಕ್ಕಾರ ಕೆ.ಟಿ. ವೆಂಕಟೇಶ್ವರ ನೂಜಿ ಮಾತನಾಡಿ, ಗ್ರಾಮಸ್ಥರು ಒಗ್ಗಟ್ಟಿನಿಂದ ಶ್ರಮಿಸಿ ಮಾಡಿದ ಸಾಧನೆ ಮಾದರಿಯಾಗಿದೆ. ಅತೀ ಅವಶ್ಯ ಕಾಮಗಾರಿಗಳನ್ನು ತತ್ಕ್ಷಣ ನೆರವೇರಿಸುವ ಸಂದರ್ಭ ಬಂದಿದ್ದು, ಭಕ್ತರ ಸಹಕಾರ ಅಗತ್ಯ. ಈಗಲೂ ಭಕ್ತರು ಧನಸಹಾಯ ಸಲ್ಲಿಸುತ್ತಿರುವುದರಿಂದ ಎಪ್ರಿಲ್ ಕೊನೆಗೆ ಅಥವಾ ಮೇ ಪ್ರಥಮ ವಾರದಲ್ಲಿ ಲೆಕ್ಕಪತ್ರ ಮಂಡಿಸಲು ಸಾಧ್ಯವಾಗುತ್ತದೆ ಎಂದರು.