ಒಬ್ಬ ವ್ಯಕ್ತಿ ಹೇಗೆ? ಏನು? ಎಂಬುದು ಆತನ ದೇಹ ಸೌಂದರ್ಯದಿಂದಲೋ, ಸಂಪತ್ತಿನಿಂದಲೋ ಗುರುತಿಸಲ್ಪಡುವಂತದ್ದು ಅಲ್ಲವೇ ಅಲ್ಲ. ಇದಕ್ಕಿರುವ ಮೌಲ್ಯಮಾಪಕವೆಂದರೆ ಆತನ ಮನಸ್ಸು. ಅಂದರೆ ಒಬ್ಬ ವ್ಯಕ್ತಿ ಒಳ್ಳೆಯವನೋ ಕೆಟ್ಟವನೋ ಎಂಬುದು ಅವನ ಮನಸ್ಸು ಹೇಗೆ ಎಂಬುದರ ಮೇಲೆ ನಿರ್ಧರಿತವಾಗುತ್ತದೆ. ಮನಸ್ಸು ಹೇಗೆ ಎಂಬುದನ್ನು ತೋರಿಸಿಕೊಡುವುದು ದೇಹ. ಮನಸ್ಸು ಮಾರ್ಗದರ್ಶಕವಾದರೆ ದೇಹ ಸಾಧನ. ಮನಸ್ಸು ನಿರ್ಧರಿಸಿದ ಕ್ರಿಯೆ ಕಾರ್ಯರೂಪಕ್ಕೆ ಬರುವುದು ದೇಹದ ಮೂಲಕವೇ. ಹಾಗಾಗಿ ನಡೆ-ನುಡಿಯಲ್ಲೇ ಒಬ್ಬನ ಮನಸ್ಸು ಹೇಗೆ ಎಂಬುದು ತಿಳಿದುಬಿಡುತ್ತದೆ. ತ್ರಿಗುಣಾತ್ಮಕವಾದ ಮನಸ್ಸು ಶುದ್ಧವಾಗುತ್ತ ಹೋದಂತೆ ಸಂಪೂರ್ಣವಾಗಿ ಸತ್ತ್ವಗುಣವನ್ನೇ ಬೆಳೆಸಿಕೊಳ್ಳುತ್ತದೆ. ಇದಕ್ಕೆ ಮನಸ್ಸು ಸ್ಥಿರವಾಗಿರಬೇಕಾದುದು ಬಹುಮುಖ್ಯ. ಆದರೆ ಇದನ್ನು ಸಾಧಿಸುವುದು ಮಾತ್ರ ಸುಲಭದ ಮಾತಲ್ಲ. ಎಲ್ಲ ವೇಗಕ್ಕಿಂತಲೂ ಅತೀವೇಗವೆಂದರೆ ಮನೋವೇಗವಂತೆ. ನಮ್ಮ ಮನಸ್ಸು ಕ್ಷಣಾರ್ಧದಲ್ಲಿಯೇ ವಿದೇಶವನ್ನು ಸುತ್ತಿ ಬಂದು ಬಿಡುತ್ತದೆ. ಮನಸ್ಸು ಬಿಡುವೇ ಇಲ್ಲದ ನದಿಯಂತೆ. ಹರಿಯುತ್ತಲೇ ಇರುತ್ತದೆ. ಎಲ್ಲಿಗೆ? ಹೇಗೆ? ಎನ್ನುವ ಪ್ರಶ್ನೆ ಹರಿವ ನೀರಿಗೆ ಹುಟ್ಟುವುದಿಲ್ಲವೋ, ಕಾಡು-ಮೇಡು, ಊರು-ಕೇರಿ, ಪ್ರಪಾತ ಎಲ್ಲ ಕಡೆಯೂ ತನಗೆ ಸುಲಭವಾದ ಕಡೆಗೆ ನೀರು ಹರಿಯುವುದೋ ಹಾಗೇ ನಮ್ಮ ಮನಸ್ಸು ಕೂಡ ಹರಿಯುತ್ತಲೇ ಇರುತ್ತದೆ. ನದಿಗೆ ಮಾತ್ರ ಹರಿಯುವುದು ಧರ್ಮ; ಮನಸ್ಸಿಗಲ್ಲ.
ಹಾಗಾದರೆ ಈ ಮನಸ್ಸನ್ನು ಸ್ಥಿರವಾಗಿಟ್ಟುಕೊಳ್ಳುವುದು ಹೇಗೆ? ಇದಕ್ಕೆ ಉತ್ತರವಾಗಿ “ಆಸನ ಮತ್ತು ಪ್ರಾಣಾಯಾಮದ ಮೂಲಕ ಶ್ವಾಸವನ್ನು ಗೆದ್ದು, ವೈರಾಗ್ಯ ಹಾಗೂ ಅಭ್ಯಾಸಬಲದಿಂದ ತನ್ನ ಮನವನ್ನು ವಶಪಡಿಸಿಕೊಳ್ಳಬೇಕು. ಮತ್ತು ಬಹಳ ಜಾಗರೂಕತೆಯಿಂದ ಅದನ್ನುಒಂದು ಗುರಿಯಲ್ಲಿ ನೆಲೆಗೊಳಿಸಬೇಕು. ಇದನ್ನು ಬಾಣ ತಯಾರಿಸುವಾತನಿಂದ ಕಲಿತೆ” ಎನ್ನುತ್ತಾರೆ ಅವಧೂತ ದತ್ತಾತ್ರೆಯರು. ಓರ್ವ ಕಮ್ಮಾರನು ಬಾಣವನ್ನು ತಯಾರಿಸುತ್ತಿದ್ದನು. ಅವನ ಬಳಿಯಿಂದಲೇ ಭೇರಿ, ನಗಾರಿ, ಕಹಳೆ ಮುಂತಾದ ವಾದ್ಯಗಳೊಂದಿಗೆ ರಾಜನ ಮೆರವಣಿಗೆ ಹೊರಟಿತ್ತು. ಆದರೆ ಅವನಿಗೆ ಇದರ ಅರಿವೇ ಇರದಷ್ಟು ತನ್ನ ಕಾಯಕದಲ್ಲಿ ತಲ್ಲೀನನಾಗಿ ಹೋಗಿದ್ದನು. ಇದನ್ನು ನಾನು ನೋಡಿದೆ. ಪರಮಾನಂದ ಸ್ವರೂಪೀ ಪರಮಾತ್ಮನಲ್ಲಿ ಮನಸ್ಸು ಸ್ಥಿರವಾದಾಗ ಅದು ಕ್ರಮವಾಗಿ ಕರ್ಮವಾಸನೆಯ ಧೂಳನ್ನು ತೊಳೆದುಬಿಡುತ್ತದೆ. ಸತ್ತ್ವಗುಣದ ವೃದ್ಧಿಯಾಗುತ್ತದೆ. ರಜೋಗುಣ ಮತ್ತು ತಮೋಗುಣ ಇವುಗಳ ವೃತ್ತಿಗಳನ್ನು ತ್ಯಾಗಗೈದು ಮನಸ್ಸು- ಕಟ್ಟಿಗೆ ಇಲ್ಲದ ಅಗ್ನಿಯು ಶಾಂತವಾಗುವಂತೆ ಶಾಂತವಾಗುತ್ತದೆ. ಈ ವಿಧವಾಗಿ ಚಿತ್ತವು ತನ್ನ ಆತ್ಮನಲ್ಲೇ ಸ್ಥಿರ-ನಿರುದ್ಧನಾದವನಿಗೆ ಒಳಗೆ-ಹೊರಗೆ ಎಲ್ಲಿಯೂ ಯಾವುದೇ ಪದಾರ್ಥದ ಎಚ್ಚರವಿರುವುದಿಲ್ಲ. ಈ ರೀತಿ ಮನಸ್ಸನ್ನು ಸ್ಥಿರವಾಗಿಟ್ಟರೆ ಸತ್ತ್ವಗುಣರಾಗುವುದು ಸುಲಭ.
ಮನಸ್ಸು ಬಾಣ ತಯಾರಿಸುವವನಂತೆ ತನ್ಮಯವಾಗುವಂತೆ ಸ್ಥಿರಗೊಳಿಸುವುದನ್ನು ಅಭ್ಯಾಸ ಮಾಡಬೇಕು. ನಮ್ಮ ತಲ್ಲೀನತೆಯನ್ನು ಕೆಡಿಸುವುದೇ ಶಬ್ದ. ಕಿವಿಗೆ ಬಂದಪ್ಪಳಿಸುವ ಕಡೆ ಮನಸ್ಸು ತಿರುಗಿದ ಕೂಡಲೆ ಕಣ್ಣು ಕೂಡ ಅತ್ತ ಹೊರಳುತ್ತದೆ. ಅಲ್ಲಿಗೆ ನಮ್ಮ ಏಕಾಗ್ರತೆ ಕೆಡುತ್ತದೆ. ಹಾಗಾಗಿ ಎಷ್ಟೇ ದೊಡ್ಡದಾದ ಸದ್ದು ಕಿವಿಯನ್ನು ತಲುಪಿದರೂ ಅದು ಮನಸ್ಸನ್ನು ತಲುಪಲಾರದ ಸ್ಥಿತಿಯನ್ನು ತಲುಪಬೇಕು. ಈ ಯುಗದಲ್ಲಿ ಇಂತಹ ಪ್ರಯತ್ನ ಸದಾ ಜಾರಿಯಲ್ಲಿದ್ದಾಗ ಮಾತ್ರ ಮನಸ್ಸು ಸ್ಥಿರವಾದೀತು; ಸತ್ತ್ವಗುಣ ಬೆಳೆಯಲು ಅವಕಾಶವಾದೀತು.
||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||
– ಭಾಸ್ವ.