ಕಾವೂರು: ಮಹಾಭಾರತ, ರಾಮಾಯಣದಲ್ಲಿರುವ ಪಾತ್ರ ಗಳನ್ನು ಕೇವಲ ಕಥೆಗಳಿಗಷ್ಟೆ ಸೀಮಿತ ಗೊಳಿಸಬಾರದು. ಅದರ ಸಾರ್ವಕಾಲಿಕ ಸಂದೇಶಗಳನ್ನು ತಿಳಿದು ಬದುಕಿನಲ್ಲಿ ಅಳವಡಿಸಿಕೊಳ್ಳುವುದರಿಂದ ಉತ್ತಮ ವ್ಯಕ್ತಿತ್ವ ನಿರ್ಮಾಣ ಸಾಧ್ಯ ಎಂದು ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ನುಡಿದರು.
ಕಾವೂರಿನಲ್ಲಿರುವ ಶಾಖಾಮಠದಲ್ಲಿ ನಡೆದ ಬೆಳದಿಂಗಳ ಚಿಂತನ ಚಾವಡಿ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು. ರಾಮಾಯಣ, ಮಹಾಭಾರತದ ಎಲ್ಲ ಪಾತ್ರಗಳು ಇಂದಿನ ಸಮಾಜಕ್ಕೂ ಅನ್ವಯವಾಗುತ್ತದೆ ಎನ್ನುವುದನ್ನು ಅರಿತು ಕೊಳ್ಳುವ ಅಗತ್ಯವಿದೆ. ಪುರಾಣದ ಕಥೆಗಳ ತಾತ್ವಿಕ ಸಂದೇಶಗಳು ಮನನಮಾಡಿ ಅದರ ಲ್ಲಿರುವ ಸಕಾರಾತ್ಮಕ ವಿಚಾರಗಳನ್ನು ಅರಿತು ಜೀವನದಲ್ಲಿ ಅಳವಡಿಸಿಕೊಂಡರೆ ಬದುಕಿನ ಯಥಾರ್ಥ ಜ್ಞಾನ ಪ್ರಾಪ್ತಿಯಾಗಲು ಸಾಧ್ಯ. ವಾಸ್ತವ ಮತ್ತು ನೈಜತೆಯ ತಾತ್ವಿಕತೆಯನ್ನು ತಿಳಿಸದೆ ಕೇವಲ ಢಾಂಬಿಕತನದ ಪ್ರದರ್ಶನವಾಗಬಾರದು ಎಂದರು.
ಪಿ.ಎಸ್. ಪ್ರಕಾಶ್ ಸ್ವಾಗತಿಸಿದರು. ಸಂಸ್ಥೆಯ ಮ್ಯಾನೇಜರ್ ಸುಬ್ಬ ಕಾರಡ್ಕ ವಂದಿಸಿದರು. ನರಸಿಂಹ ಕುಲಕರ್ಣಿ ನಿರೂಪಿಸಿದರು. ಬಳಿಕ ‘ಶಲ್ಯ ಸಾರಥ್ಯ’ ತಾಳಮದ್ದಳೆ ಕೂಟ ನಡೆಯಿತು.