ಕಾಟುಕುಕ್ಕೆ: ಕಲಿಯುಗದ ಕೋಟ್ಯಾಂತರ ಭಾರತೀಯರ ಆರಾಧ್ಯಮೂರ್ತಿ, ಕಲಿಯುಗದ ಭೂವೈಕುಂಠವೆನಿಸಿದ ಏಳು ಬೆಟ್ಟದ ಒಡೆಯ ತಿರುಮಲ – ತಿರುಪತಿ ದೇವಸ್ಥಾನದಿಂದ ಶ್ರೀ ದೇವಿ ಭೂದೇವಿ ಸಹಿತ ಶ್ರೀನಿವಾಸ ದೇವರು ಕಾಟುಕುಕ್ಕೆಯ ಶ್ರೀ ಸುಬ್ರಾಯ ದೇವಸ್ಥಾನದ ಸನ್ನಿಧಿಗೆ ಬರುವ ಮೂಲಕ ಕಾಟುಕುಕ್ಕೆ ಸುಬ್ರಾಯನ ಸನ್ನಿಧಿ ಭಕ್ತರ ಪಾಲಿಗೆ ಭೂವೈಕುಂಠವೇ ಆಯಿತು. ಶ್ರೀನಿವಾಸನ ಮಹಾಮಂಗಲೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು.
ಅತ್ಯಂತ ಗ್ರಾಮೀಣ ಪ್ರದೇಶವಾಗಿರುವ ಕಾಟುಕುಕ್ಕೆಗೆ ಭಕ್ತರ ಭಜನೆಗೊಲಿದು ತಿರುಪತಿಯ ಒಡೆಯ ಆಗಮಿಸುವ ಮೂಲಕ ಭಕ್ತರ ಬದುಕಿನಲ್ಲಿ ಬಂಗಾರದ ಕ್ಷಣವೇ ಆಗಿಹೋಯಿತು. ಭಕ್ತಿಯ ಕರೆಗೆ ಒಲಿದು ಕಾಟುಕುಕ್ಕೆಯಲ್ಲಿ ಪ್ರಸನ್ನತೆಯ ಮೂಲಕ ನಮ್ಮೊಳಗಿನ ಆಸ್ತಿಕತೆಯನ್ನು ಬಲಪಡಿಸಲು ಶ್ರೀನಿವಾಸ ದೇವರು ಜ.20 ರಂದು ಬೆಳಗ್ಗೆ ಕಾಟುಕುಕ್ಕೆ ಶ್ರೀ ಸನ್ನಿಧಿಗೆ ಚಿತ್ತೈಸುವ ಮೂಲಕ ಭಕ್ತರಲ್ಲಿ ಚೈತನ್ಯ ತುಂಬಿದರು.
ಕಾಸರಗೋಡಿನ ಕೂಡ್ಲು ಶ್ರೀ ವಿಷ್ಣುಮಂಗಲದಲ್ಲಿ ಜ. 19ರಂದು ರಾತ್ರಿ ಪೂಜೆ ಸ್ವೀಕರಿಸಿ, 20ರಂದು ಬೆಳಗ್ಗೆ ಕಾಸರಗೋಡು ನಗರದ ‘ಈಶಾವಾಸ್ಯಂ’ ನಲ್ಲಿ ಪೂಜೆ ಸ್ವೀಕರಿಸಿ ಕಾಟುಕುಕ್ಕೆಗೆ ಪ್ರವೇಶಿಸಿದ ತಿರುಮಲ – ತಿರುಪತಿ ದೇವಸ್ಥಾನದ ಶ್ರೀದೇವಿ, ಭೂದೇವಿ ಸಹಿತ ಶ್ರೀನಿವಾಸ ದೇವರಿಗೆ ಸಾವಿರಾರು ಭಕ್ತರು ಪೂರ್ಣಕುಂಭ ಸ್ವಾಗತ ನೀಡಿ ಬರಮಾಡಿಕೊಂಡರು.
ಶ್ರೀನಿವಾಸ ಮಹಾಮಂಗಲೋತ್ಸವದ ಸ್ವಾಗತ ಸಮಿತಿ ಅಧ್ಯಕ್ಷ ಮಿತ್ತೂರು ಪುರುಷೋತ್ತಮ ಭಟ್, ಕಾಟುಕುಕ್ಕೆ ಶ್ರೀ ಪುರಂದರದಾಸರ ಆರಾಧನೋತ್ಸವ ಸಮಿತಿ ಅಧ್ಯಕ್ಷರು, ಪ್ರಧಾನ ಸಂಚಾಲಕರಾದ ರಾಮಕೃಷ್ಣ ಕಾಟುಕುಕ್ಕೆ, ಉಪಾಧ್ಯಕ್ಷ ಸಚ್ಚಿದಾನಂದ ಖಂಡೇರಿ, ದೇವಸ್ಥಾನದ ಆಡಳಿತ ಮೊಕ್ತೇಸರ ವಿಷ್ಣುಪ್ರಕಾಶ್ ಪಿಲಿಂಗಲ್ಲು, ದೇವಸ್ಥಾನದ ಪ್ರಧಾನ ಅರ್ಚಕರಾದ ನಾರಾಯಣ ಮಯ್ಯ, ಕೇರಳ ರಾಜ್ಯ ದಾಸ ಸಾಹಿತ್ಯ ಪ್ರಚಾರಕ ಶಿವರಾಮ ಕಾಸರಗೋಡು, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಬದಿಯಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎನ್. ಕೃಷ್ಣ ಭಟ್, ಕೂಡ್ವು ವಿಷ್ಣುಮಂಗಲ ದೇವಸ್ಥಾನದ ಅರ್ಚಕ ಪ್ರಸನ್ನ ಶ್ಯಾನುಭೋಗ್, ವಿವಿಧ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಮಹಿಳಾ ಸಮಿತಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳ ನೇತೃತ್ವದಲ್ಲಿ ಭಕ್ತರಿಂದ ಭಜನೆ, ವಾದ್ಯಘೋಷಗಳೊಂದಿಗೆ ಭವ್ಯ ಸ್ವಾಗತ ನೀಡಲಾಯಿತು. ಆ ಬಳಿಕ ಕ್ಷೇತ್ರದಲ್ಲಿ ಪೂಜೆ ನಡೆಯಿತು. ತಿರುಪತಿಯ ಅರ್ಚಕರಾದ ಸುರೇಶಾರಾಚಾರ್ಯ, ವಿಜಯಸಿಂಹ ಆಚಾರ್ಯ, ಸುಜಯ್ ಕೃಷ್ಣ, ಕುರೇಶ್ ಆಚಾರ್ಯ, ಆನಂದಾಚಾರ್ಯ ಹಾಗೂ ರಾಮಾಚಾರ್ಯ ಮೊದಲಾದವರು ಪೂಜೆ ನೆರವೇರಿಸಿದರು.
ಕಾಟುಕುಕ್ಕೆ ಶ್ರೀ ಸುಬ್ರಾಯ ದೇವರ ಸನ್ನಿಧಾನದಲ್ಲಿ ಶ್ರೀ ಪುರಂದರದಾಸ ಆರಾಧನೋತ್ಸವ ಸಮಿತಿ ಕಾಟುಕುಕ್ಕೆ ಇದರ ದಶಮಾನೋತ್ಸವ ಪ್ರಯುಕ್ತ ಭಜಕರ ಸಹಕಾರದೊಂದಿಗೆ ಶ್ರೀನಿವಾಸ ಮಹಾ ಮಂಗಲೋತ್ಸವ, ಖ್ಯಾತ ದಾಸ ಸಂಕೀರ್ತನಕಾರ ರಾಮಕೃಷ್ಣ ಕಾಟುಕುಕ್ಕೆ ಅವರ ದಾಸಸಂಕೀರ್ತನಾ ಯಾನದ 500ನೇ ಸಂಭ್ರಮದ ಲೋಕಾರ್ಪಣೆಯ ಅಂಗವಾಗಿ ಶ್ರೀನಿವಾಸ ಮಹಾಮಂಗಲೋತ್ಸವ ಆಯೋಜಿಸಲಾಗಿದೆ.
ಶನಿವಾರ ಬೆಳಗ್ಗೆ ಪುರಂದರದಾಸರ ಮಂಟಪ ಮುಂಭಾಗದಲ್ಲಿ ಭಜನಾ ಸಂಕೀರ್ತನೆ ಹಾಗೂ ವೈಷ್ಣವಿ ವೈದೇವಿ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ನೇತೃತ್ವದಲ್ಲಿ ವಿಷ್ಣು ಸಹಸ್ರನಾಮ ಮತ್ತು ಲಕ್ಷ್ಮೀ ಶೋಭಾನೆ ಪಾರಾಯಣ ನಡೆಯಿತು. ವಿದುಷಿ ಉಷಾ ಹೆಬ್ಟಾರ್ ಮಣಿಪಾಲ ಅವರಿಂದ ವಿಶೇಷ ಭಜನಾ ಪ್ರಾತ್ಯಕ್ಷಿಕೆ ಜರಗಿತು.