ಕಟೀಲು : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿಯ ವತಿಯಿಂದ ಡಿ. 15ರಂದು ಕೋಟಿ ಜಪಯಜ್ಞಕ್ಕೆ ಸಂಕಲ್ಪ ಮಾಡಿ ದೀಕ್ಷೆ ಮಾಡಲಾಗಿದ್ದು ರವಿವಾರ ಅದರ ಪರಿಸಮಾಪ್ತಿ ನಡೆಯಿತು.
ಊಭಯ ಜಿಲ್ಲೆ ಸಹಿತ ಮುಂಬಯಿ, ಬೆಂಗಳೂರು, ಚೆನ್ನೈ ಸೇರಿದಂತೆ ಸುಮಾರು 30 ಸಾವಿರಕ್ಕೂ ಅಧಿಕ ಜನರು ಹೆಸರು ನೋಂದಾಯಿಸಿದ್ದರು. ಬೆಳಿಗ್ಗೆ 5 ಗಂಟೆಗೆ ಸರತಿ ಸಾಲಿನಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಮಾಡಿ ಭ್ರಾಮರೀವನದಲ್ಲಿ ಈ ಕೋಟಿ ಜಪಯಜ್ಞದ ಪ್ರಸಾದ ಪಡೆದರು.
ದೇವಳದಲ್ಲಿ ಬೆಳಗ್ಗೆ ತ್ರಿಕಾಲ ಪೂಜೆ, ಭ್ರಾಮರೀ ವನದಲ್ಲಿ ಬೆಳಗ್ಗಿನಿಂದಲೇ ಸುಮಾರು 100ಕ್ಕೂ ಮಿಕ್ಕಿ ಪೋರೋಹಿತ ಹಾಗೂ ತಂತ್ರಿಗಳ ನೇತೃತ್ವದಲ್ಲಿ ನವಾಕ್ಷರಿಯಾಗ, ಸಹಸ್ರನಾರೀಕೇಳ ಗಣಯಾಗ, ಸಹಸ್ರಚಂಡಿಕಾ ಸಪ್ತಸತೀಪಾರಾಯಣ, ಕುಮಾರಿ ಪೂಜೆ, ಸಹಸ್ರಚಂಡಿಕಾಯಾಗ ಅಗ್ನಿಜನನ, ಕೋಟಿ ಜಪಯಾಜ್ಞ ಪರಿಸಮಾಪ್ತಿ ನಡೆಯಿತು.
ಕೋಟಿ ಜಪಕ್ಕೆ ನೋಂದಣಿ ಮಾಡಿದವರು ಭ್ರಾಮರೀ ವನದಲ್ಲಿನ ಕೌಂಟರ್ನಲ್ಲಿ ಕುಂಕುಮ ಪಡೆದು ಮಂತ್ರ ಪಠಣ ಮಾಡಿ ಭ್ರಾಮರೀ ವನದಲ್ಲಿ ಕುಂಕುಮ ನೀಡಿ ಬಳಿಕ ಪ್ರಸಾದ ಪಡೆದರು. ರವಿವಾರ ದೇವಸ್ಥಾನಕ್ಕೆ ನಿರೀಕ್ಷೆಗೂ ಮೀರಿ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದರು. 1.50 ಲಕ್ಷಕ್ಕೂ ಮಿಕ್ಕಿ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. 30 ಸಾವಿರ ಮಂದಿ ಫಲಹಾರ ಪಡೆದರು.