ಕಾಸರಗೋಡು : ಇತಿಹಾಸ ಪ್ರಸಿದ್ಧ ನಗರದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕ ಮಹೋತ್ಸವ ಮತ್ತು ನೂತನ ರಾಜಗೋಪುರ ಲೋಕಾರ್ಪಣೆ ಮಾ.13 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಿತು.
ಮಾ.13 ರಂದು ಬೆಳಗ್ಗೆ ಪೂರ್ವಾಹ್ನ 7 ರಿಂದ ಗಣಪತಿ ಹೋಮ, ಬಿಂಬ ಶುದ್ಧಿ, ಕಲಶಪೂಜೆ, ಬಿಂಬ ಶುದ್ಧಿ ಕಲಶಾಭಿಷೇಕ, ಸಾನ್ನಿಧ್ಯ ಕಲಶಪೂಜೆ, ಸಾನ್ನಿಧ್ಯ ಕಲಶಾ ಭಿಷೇಕ ನಡೆಯಿತು. ಪೇಜಾವರ ಅಧೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ರಾಜಗೋಪುರವನ್ನು ಲೋಕಾರ್ಪಣೆಗೈದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಕ್ಷೇತ್ರದ ತಂತ್ರಿ ವರ್ಯ ಉಚ್ಚಿಲತ್ ಪದ್ಮನಾಭ ಅವರು ಆಶೀರ್ವಚನ ವಿತ್ತರು. ದೇವಸ್ಥಾನದ ಕಾರ್ಯ ನಿರ್ವಹಣಾ ಧಿಕಾರಿ ಎಂ.ಬಾಬು, ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಸಿ.ವಿ. ಪೊದುವಾಳ್ ಉಪಸ್ಥಿತರಿದ್ದರು. ಮಧ್ಯಾಹ್ನ ಮಹಾ ಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ ನಡೆಯಿತು.
ಮಾ.12 ರಂದು ಸಂಜೆ ಪ್ರಾರ್ಥನೆ, ಗೋಪುರ ಪರಗ್ರಹಂ, ಪುಣ್ಯಾಹ, ಪ್ರಾಕಾರ ಶುದ್ಧಿ, ವಾಸ್ತು ರಕ್ಷೋಘ್ನ ಹೋಮ, ವಾಸ್ತು ಬಲಿ ಜರಗಿತು. ಮಾ.19 ರಿಂದ 23 ರ ವರೆಗೆ ವರ್ಷಾವಧಿ ಜಾತ್ರಾ ಮಹೋತ್ಸವ ನಡೆಯಲಿದೆ.