ಅಜೆಕಾರು : ಕರಿಯಾಲು ಶ್ರೀ ವಿಟ್ಠಲ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಅಂಡಾರು, ಶಿರ್ಲಾಲು ಗ್ರಾಮ ಇದರ ಶ್ರೀ ವಿಟ್ಠಲ ದೇವರ ಗರ್ಭಗುಡಿ ಹಾಗೂ ತೀರ್ಥಮಂಟಪದ ಶಿಲಾನ್ಯಾಸ ಕಾರ್ಯಕ್ರಮವು ಜೂ. 26ರಂದು ನಡೆಯಿತು.
ಶಿಲಾನ್ಯಾಸದ ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ ತೀರ್ಥ ಸ್ವಾಮೀಜಿ, ಶ್ರದ್ಧೆಯಿಂದ ದೇವರ ಆರಾಧನೆ ಮಾಡಿ ದೇವರ ಮೇಲೆ ನಂಬಿಕೆ ಇರಿಸಿದಾಗ ಮಾತ್ರ ಧರ್ಮ ಉಳಿಯಲು ಸಾಧ್ಯ. ಧಾರ್ಮಿಕ ಕೇಂದ್ರಗಳು ಅಭಿವೃದ್ಧಿಗೊಂಡಾಗ ಗ್ರಾಮವು ಸುಭೀಕ್ಷೆಯಿಂದ ಕೂಡಿರಲಿದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಚ್. ಗೋಪಾಲ ಭಂಡಾರಿ ವಹಿಸಿ ಮಾತನಾಡಿ, ಧಾರ್ಮಿಕ ಹಾಗೂ ಶಿಕ್ಷಣ ಕೇಂದ್ರಗಳು ಮಾನವೀಯ ಮೌಲ್ಯವನ್ನು ಬೆಳೆಸುವ ಕೇಂದ್ರಗಳಾಗಿವೆ ಎಂದರು.
ಜಿ.ಪಂ. ಸದಸ್ಯೆ ಜ್ಯೋತಿ ಹರೀಶ್ ಧಾರ್ಮಿಕ ಸಭೆ ಉದ್ಘಾಟಿಸಿ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ಒದಗಿಸುವ ಭರವಸೆ ನೀಡಿದರು.
ಉದ್ಯಮಿಗಳಾದ ಜನಾರ್ದನ ಶೆಟ್ಟಿ ಶಿರ್ಲಾಲು, ಶಿವರಾಮ್ ಜಿ. ಶೆಟ್ಟಿ ಮುಂಬಯಿ, ಕೆ. ಗುಣಪಾಲ ಕಡಂಬ, ಉದಯ್ ಕುಮಾರ್ ಶೆಟ್ಟಿ ಮುನಿಯಾಲು, ಡಾ| ಮಹಾವೀರ್ ಜೈನ್ ಮೂಡುಬಿದಿರೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಉಡುಪಿ ಜಿಲ್ಲೆ ನಿರ್ದೇಶಕ ಗಣೇಶ್ ಜಿ., ವರಂಗ ಗ್ರಾ.ಪಂ. ಉಪಾಧ್ಯಕ್ಷ ದಿನೇಶ್ ಸೇರ್ವೆಗಾರ್, ರಾಘವೇಂದ್ರ ತಂತ್ರಿ, ರಂಗನಾಥ ಭಟ್, ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟನ ಅಧ್ಯಕ್ಷ ಸುಧಾಕರ ಶೆಟ್ಟಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ, ನಿವೃತ್ತ ಪ್ರಾಂಶುಪಾಲ ಗುಣಪಾಲ ಕಡಂಬ ಪ್ರಸ್ತಾವನೆಗೈದರು. ಜನಾರ್ದನ ಶೆಟ್ಟಿ ಮನವಿ ಪತ್ರ ಬಿಡುಗಡೆ ಮಾಡಿದರು. ಧಾರ್ಮಿಕ ಕಾರ್ಯಗಳು ಉಡುಪಿ ಕುಕ್ಕಿಕಟ್ಟೆ ರಾಘವೇಂದ್ರ ತಂತ್ರಿ ಹಾಗೂ ಪ್ರಧಾನ ಅರ್ಚಕ ರಂಗನಾಥ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
ಈ ಸಂದರ್ಭ ಗ್ರಾಮಸ್ಥರಿಂದ ಮುಷ್ಠಿಕಾಣಿಕೆ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮದಲ್ಲಿ ಸ್ಥಳದಾನದ ದಾನಿಗಳು ಹಾಗೂ ಶಿಲ್ಪಿಗಳಿಗೆ ಗೌರವಿಸಲಾ ಯಿತು. ದೇವಸ್ಥಾನದ ಆಡಳಿತ ಮೋಕ್ತೇಸರ ಅಂಡಾರು ಕೆ. ಮಹಾವೀರ ಹೆಗ್ಡೆ ಅವರು ಸ್ವಾಗತಿಸಿದರು. ಬೇಬಿ ಪ್ರಾರ್ಥಿಸಿದರು. ಅಜಿತ್ ಕುಮಾರ್ ನಿರೂಪಿಸಿದರು. ಸೀತಾರಾಮ್ ನಾಯಕ್ ವಂದಿಸಿದರು. ದೇವಸ್ಥಾನ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಸಹಕರಿಸಿದರು.