ಕಾಪು: ಸಮಸ್ತ ಸಾರಸ್ವತ ಮಠ ಪರಂಪರೆಯ ಆದ್ಯ ಗುರುಪೀಠ ಕೈವಲ್ಯ ಶ್ರೀ ಸಂಸ್ಥಾನ ಶ್ರೀಮತ್ ಗೌಡಾಪಾದಾಚಾರ್ಯ ಮಠದ 77ನೇ ಯತಿಗಳಾದ ಶ್ರೀಮತ್ ಗೌಡಪಾದಾಚಾರ್ಯ ಶಿವಾನಂದ ಸರಸ್ವತೀ ಸ್ವಾಮೀ ಮಹಾರಾಜ್ ಅವರ ರಜತ ಮಹೋತ್ಸವ ಚಾತುರ್ಮಾಸ್ಯವ್ರತಾಚರಣೆಯು ಜು. 16ರಿಂದ ಸೆ. 14ರ ವರೆಗೆ ಗೋವಾರಾಜ್ಯದ ಪೋಂಡಾದ ಕವಳೆಯಲ್ಲಿರುವ ಶ್ರೀ ಸಂಸ್ಥಾನದ ಕೇಂದ್ರೀಯ ಶಾಖಾ ಮಠದಲ್ಲಿ ವಿವಿಧ ಧಾರ್ಮಿಕ,ಸಾಂಸ್ಕೃತಿಕ, ಆಧ್ಯಾತ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಆ. 5ರಂದು ಪ್ರಥಮ ಶ್ರಾವಣ ಸೋಮವಾರ, ಆ. 9ರಂದು ವರಮಹಾಲಕ್ಷ್ಮೀವ್ರತ, ಆ. 12ರಂದು ದ್ವಿತೀಯ ಶ್ರಾವಣ ಸೋಮವಾರ, ಆ. 19ರಂದು ತೃತೀಯ ಶ್ರಾವಣ ಸೋಮವಾರ, ಆ. 23ರಂದು ಶ್ರೀಕೃಷ್ಣ ಜನ್ಮಾಷ್ಟಮಿ, ಆ. 26ರಂದು ಚತುರ್ಥ ಶ್ರಾವಣ ಸೋಮವಾರ ಆಚರಣೆ ನಡೆಯಲಿದ್ದು, ಪ್ರತೀ ಸೋಮವಾರ ಪೂರ್ವಾಹ್ನ ಲಘುರುದ್ರ ಸ್ವಾಹಾಕಾರ, ಸಂಜೆ 6ರಿಂದ ಪ್ರದೋಷ ಪೂಜೆ ಜರಗಲಿದೆ.
ಸೆ. 2ರಂದು ಶ್ರೀ ಗಣೇಶ ಚತುರ್ಥಿ ಆಚರಣೆಯ ಪ್ರಯುಕ್ತ ಗಣಪತಿ ಪ್ರತಿಷ್ಠೆ ನಡೆಯಲಿದ್ದು, ಸೆ. 14ರಂದು ಚಾತುರ್ಮಾಸ್ಯ ವ್ರತ ಸಮಾಪ್ತಿ ಹಾಗೂ ಸೆ. 15ರಂದು ಗಣಪತಿ ವಿಸರ್ಜನೆ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟನೆ ತಿಳಿಸಿದೆ.