ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉದ್ಘಾಟನೆಯು ಮಂಗಳವಾರ ದೇವಳದ ಸಭಾಂಗಣದಲ್ಲಿ ನೆರವೇರಿತು.
ಪೇಜಾವರ ಕಿರಿಯ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಜೀರ್ಣೋದ್ಧಾರ ಕಾರ್ಯದ ಸಮಿತಿಯನ್ನು ಉದ್ಘಾಟಿಸಿ ಆಶೀರ್ವಚನಗೈದು, ಜೀರ್ಣೋದ್ಧಾರದಿಂದ ನಾಡಿಗೆ ಒಳ್ಳೆಯದಾಗಲಿದೆ. ಲವಲವಿಕೆಗೆ ಇದು ಪೂರಕವಾಗಿರುತ್ತದೆ. ಯಾರು ಕೂಡ ವೈಮನಸ್ಸುಗಳನ್ನು ಇರಿಸಿಕೊಳ್ಳದೆ ದೇವರ ಕಾರ್ಯದಲ್ಲಿ ಭಾಗಿಯಾದರೆ ತಮಗೆ ಮಾತ್ರವಲ್ಲದೆ ಸಮಾಜಕ್ಕೂ ಉದ್ಧಾರವಾಗುತ್ತದೆ ಎಂದರು.
ಸಚಿವ ಪ್ರಮೋದ್ ಮಧ್ವರಾಜ್ ಅವರು ಮಾತನಾಡಿ, ಸಮೀಪದ ಬೈಲೂರು, ಇಂದ್ರಾಳಿ ದೇವಸ್ಥಾನಗಳು ಜೀರ್ಣೋದ್ಧಾರವಾಗಿದೆ. ಹಳೆಯ ದೇಗುಲಗಳಲ್ಲೊಂದಾದ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಸಿದ್ಧವಾಗಿದೆ. ಜಾಗಗಳು ಕಬಳಿಕೆಯಾಗುತ್ತಿರುವ ಈ ಕಾಲದಲ್ಲೂ ಕಡಿಯಾಳಿ ದೇವಳಕ್ಕೆ 17 ಸೆಂಟ್ಸ್ ಸ್ವಂತ ಜಾಗವನ್ನು ನಳಿನಿ ಉಪಾಧ್ಯಾಯ ಎನ್ನುವವರು ದಾನವಾಗಿ ನೀಡಿರುವುದು ಸ್ಮರಣೀಯ ಎಂದು ಹೇಳಿದ ಸಚಿವರು, ದೇವರ ಕಾರ್ಯದಲ್ಲಿ ಯಾರೂ ವಿರೋಧ ಮಾಡಬಾರದು ಎಂದರು. ಉಡುಪಿ ನಗರಸಭೆ ಸದಸ್ಯ ಶಶಿರಾಜ್ ಕುಂದರ್, ದೇವಳದ ಶ್ರೀನಿವಾಸ ಹೆಬ್ಟಾರ್, ಶ್ರೀಶ ಉಪಾಧ್ಯ, ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣ ಉಪಸ್ಥಿತರಿದ್ದರು. ವಿಜಯೇಂದ್ರ ವಸಂತ್ ಕಾರ್ಯಕ್ರಮ ನಿರೂಪಿಸಿದರು.