ಸುಳ್ಯ : ಜಾಲ್ಸೂರಿನ ಶ್ರೀ ಗುರುರಾಘವೇಂದ್ರ ಸ್ವಾಮಿ ಭಜನ ಮಂದಿರದ 7ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ವಿಜೃಂಭಣೆಯಿಂದ ಜರಗಿತು.
ಬೆಳಗ್ಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಗಳ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ಜರಗಿತ್ತು. ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು. ಸಂಜೆ ಶ್ರೀ ಕ್ಷೇತ್ರದ ನಾಗಸಾನ್ನಿಧ್ಯದಲ್ಲಿ ಆಶ್ಲೇಷಾ ಬಲಿ ಜರಗಿತು.
ರಾತ್ರಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಜನ ಮಂದಿರದ ಅಧ್ಯಕ್ಷ ಎಸ್. ಬಾಬು ಪಾಟಾಳಿ ಅಧ್ಯಕ್ಷತೆ ವಹಿಸಿದ್ದರು. ಕುದ್ರೋಳಿ ಶ್ರೀ ನಾರಾಯಣ ಗುರು ಪ.ಪೂ. ಕಾಲೇಜಿನ ಉಪನ್ಯಾಸಕ ಕೇಶವ ಬಂಗಾರ ಗೇರುಕಟ್ಟೆ ಧಾರ್ಮಿಕ ಉಪನ್ಯಾಸ ನೀಡಿದರು.
ಕುಕ್ಕಂದೂರು ಕಿನ್ನಿಮಾಣಿ-ಪೂಮಾಣಿ ದೇವಸ್ಥಾನದ ಪ್ರಧಾನ ಅರ್ಚಕರಾಗಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ, ವಯೋನಿವೃತ್ತಿ ಹೊಂದಿದ ನಾರಾಯಣ ರೈ ಕುಕ್ಕಂದೂರು ಹಾಗೂ ಯಕ್ಷಪ್ರತಿಭೆ ಮೋಹನ್ ಬೆಳ್ಳಿಪ್ಪಾಡಿ ಅವರನ್ನು ಭಜನ ಮಂದಿರದ ಖಜಾಂಚಿ ವಿಷ್ಣು ಭಟ್ ಪೆರಂಬಾರು ಅವರು ಸಮ್ಮಾನಿಸಿದರು. ಭಜನ ಮಂದಿರದ ಗೌರವ ಸಲಹೆಗಾರ ಜಯರಾಮ ರೈ ಜಾಲ್ಸೂರು ಸ್ವಾಗತಿಸಿದರು.