Home ನಂಬಿಕೆ ಸುತ್ತಮುತ್ತ ಗಣಪತಿ ಅಥರ್ವಶೀರ್ಷದ ಮಹತ್ತ್ವವೇನು?

ಗಣಪತಿ ಅಥರ್ವಶೀರ್ಷದ ಮಹತ್ತ್ವವೇನು?

5276
0
SHARE

ಗಣಪತಿ ಅಥರ್ವಶೀರ್ಷ ಅಥವಾ ಗಣೇಶೋಪನಿಷತ್ ಎಂದು ಕರೆಯಲ್ಪಡುವ ಗಣಪತಿಸ್ತುತಿಯ ಮಂತ್ರ ಪ್ರಸಿದ್ಧವಾದುದು. ಇದನ್ನು ಕೇಳುತ್ತಿದ್ದರೆ ಕರ್ಣಾನಂದದ ಜೊತೆಗೆ ಮನಸ್ಸಿಗೂ ಆನಂದವಾಗುತ್ತದೆ. ನಿರ್ವಿಘ್ನದಾಯಕನಾದ ಗಣಪತಿ ಆದಿಪೂಜಿತನಾಗಿರುವುದರ ಜೊತೆಗೆ ಹೆಚ್ಚಿನ ಜನರು ಇಷ್ಟಪಡುವ ದೇವನಾಗಿದ್ದಾನೆ. ಹಾಗಾಗಿಯೇ’ಅಗಜಾನನ ಪದ್ಮಾರ್ಕಂ ಗಜಾನನ ಮಹರ್ನಿಶಮ್ | ಅನೇಕ ದಂತಂ ಭಕ್ತಾನಾಮ್ ಏಕದಂತಮುಪಾಸ್ಮಹೇ ||, ಎಂಬ ಶ್ಲೋಕ ಹುಟ್ಟಿಕೊಂಡಿದ್ದು. ಗಣೇಶನನ್ನು ಪೂಜಿಸುವಲ್ಲಿ, ಒಲಿಸಿಕೊಳ್ಳುವಲ್ಲಿ ಈ ಗಣೇಶೋಪನಿಷತ್ ಮುಖ್ಯವಾದುದು. ಈ ಗಣೇಶೋಪನಿಷತ್ತಿನ ಪಠಣ, ಗಣೇಶೋಪನಿಷತ್ತಿನ ಮೂಲಕವೇ ಮಾಡುವ ಅಥರ್ವಶೀರ್ಷ ಹವನವು ವಿಶೇಷವಾದುದಾಗಿದೆ. ಶಾಂತಿ ಮಂತ್ರದಿಂದ ಆರಂಭವಾಗಿ ’ನಮಸ್ತೇ ಗಣಪತಯೇಣ ತ್ವಮೇವ ಪ್ರತ್ಯಕ್ಷಂ ತತ್ವಮಸಿ…’ ಎಂದು ಆರಂಭಗೊಳ್ಳುವ ಈ ಉಪನಿಷತ್ತು ಮೊದಲ ಭಾಗದಲ್ಲಿ ಪ್ರಾರ್ಥನೆ, ಮಧ್ಯಭಾಗದಲ್ಲಿ ಗಣೇಶನ ಸ್ವರೂಪ ವರ್ಣನೆ, ಆಮೇಲೆ ಏಕಾಕ್ಷರ ಮಹಾಮಂತ್ರ ಹಾಗೂ ಅಷ್ಟಾಕ್ಷರ ಮೂಲಮಂತ್ರಗಳನ್ನು ಒಳಗೊಂಡಿದೆ. ಕೊನೆಯಲ್ಲಿ ಗಣಪತಿ ಧ್ಯಾನ ಅಥವಾ ಶ್ಲೋಕ ಮತ್ತು ಮಾಲಾಮಂತ್ರದ ಮೂಲಕ ಇದು ಪೂರ್ಣಗೊಳ್ಳುತ್ತದೆ. ಸ್ವರಪೂರ್ವಕವಾಗಿ ಇದನ್ನು ಉಚ್ಚರಿಸಿದರೆ ಕೇಳುಗರೂ ತನ್ಮಯತೆಯನ್ನು ಹೊಂದಿ ಗಣಪತಿಯ ಕೃಪೆಗೆ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ.

ಉಪನಿಷತ್ತಿನ ಮುಂದುವರಿದ ಭಾಗವಾಗಿ ಇದರ ಫಲಗಳನ್ನೂ ಹೇಳಲಾಗಿದೆ. ಈ ಅಥರ್ವಶೀರ್ಷವನ್ನು ಯಾರು ಅಧ್ಯಯನ ಮಾಡುತ್ತಾರೋ ಅವರು ಬ್ರಹ್ಮಸಾಕ್ಷಾತ್ಕಾರಕ್ಕೆ ಅರ್ಹರಾಗುತ್ತಾರೆ. ಅವರು ವಿಘ್ನಗಳಿಗೊಳಗಾದೆ ವಿಘ್ನಗಳೇ ಅವರಿಂದ ದೂರವಾಗಿಬಿಡುತ್ತವೆ. ಅವರು ಎಲ್ಲಾ ಕಡೆಯಿಂಲೂ ಸುಖವನ್ನೇ ಹೊಂದುವವರಾಗುತ್ತಾರೆ. ಪಂಚ ಮಹಾಪಾಪಗಳಿಂದಲೂ ಬಿಡುಗಡೆ ಹೊಂದುತ್ತಾರೆ. ಸಂಜೆ ಇದನ್ನು ಪಠಿಸಿದರೆ ಹಗಲಿನಲ್ಲಿ ಮಾಡಿದ ಪಾಪಗಳನ್ನೂ ಬೆಳಗ್ಗೆ ಪಠಿಸಿದರೆ ರಾತ್ರಿಯಲ್ಲಿ ಮಾಡಿದ ಪಾಪಗಳನ್ನೂ ಕಳೆದುಕೊಳ್ಳುತ್ತಾರೆ. ಸಂಜೆ ಮತ್ತು ಬೆಳಗ್ಗೆ ಎರಡೂ ಸಮಯದಲ್ಲಿ ಪಠಿಸಿದರೆ ಪಾಪರಹಿತರಾಗುತ್ತಾರೆ. ಸದಾ ಇದನ್ನು ಪಠಿಸುವವರು ವಿಘ್ನರಹಿತರಾಗುತ್ತಾರೆ. ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ಪುರುಷಾರ್ಥಗಳನ್ನು ಹೊಂದುತ್ತಾನೆ.

ಅಥರ್ವೋಪನಿಷತ್ ವಿಘ್ನೇಶನನ್ನು ಪಠಿಸಲು ಇರುವ ಮಹಾನ್ ಮಂತ್ರವಾದುದರಿಂದ ಸಾವಿರಕ್ಕೂ ಹೆಚ್ಚು ಬಾರಿ ಪಠಿಸಿದರೆ ನಮ್ಮೆಲ್ಲ ಇಷ್ಟಾರ್ಥಗಳು ನೆರವೇರುತ್ತದೆ. ವಿದ್ಯಾವಂತ, ಗುಣವಂತ ಮತ್ತು ಉತ್ತಮ ವಾಗ್ಮಿಯಾಗಲು ಸಾಧ್ಯ. ವ್ಯಕ್ತಿಯೊಬ್ಬ ಅಥರ್ವಶೀರ್ಷ ಮುಖೇನ ಯಜ್ಞವನ್ನು ಮಾಡುವುದರಿಂದ ಐಶ್ವರ್ಯವಂತನೂ ಕೀರ್ತಿವಂತನೂ ಮೇಧಾವಿಯೂ ಆಗುತ್ತಾನಲ್ಲದೆ ಸಕಲ ಸುಫಲಗಳನ್ನು ಹೊಂದುತ್ತಾನೆ. ಹೀಗೆ ಸಕಲ ಸಿದ್ಧಿಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

ಸಿದ್ಧಿಯನ್ನು ಪಡೆಯಲು ಸಾಧನೆ ಬೇಕೇಬೇಕು. ದೇವರ ನಂಬಿಕೆಯೂ ಅಂತಹ ಸಾಧನೆಯನ್ನೇ ಹೇಳುತ್ತದೆ. ಮಂತ್ರಗಳಲ್ಲಿನ ತಲ್ಲೀನತೆಯೂ ಒಂದು ಸಾಧನೆಯೇ. ಯಾಕೆಂದರೆ ಮರ್ಕಟನಂತಾಡುವ ಮನಸ್ಸನ್ನು ನಿಯಂತ್ರಿಸಿದರಷ್ಟೇ ಪಠಣ, ತಲ್ಲೀನತೆ ಎಲ್ಲವೂ ಸಾಧ್ಯ. ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ಬದುಕಿನ ಅನಿವಾರ್ಯತೆಗಾಗಿಯೋ ಒಂದಲ್ಲ ಒಂದು ಪಾಪಕಾರ್ಯದಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಡಗಿಕೊಳ್ಳುತ್ತೇವೆ. ಅಂತಹ ಪಾಪಗಳನ್ನು ಕಳೆಯುವವನು ಗಣನಾಯಕ. ಆತನನ್ನು ಪಠಿಸುವ ಮೂಲಕ ನಮ್ಮ ಮನಸ್ಸನ್ನು ಶುದ್ಧವಾಗಿಸಿಕೊಳ್ಳಲು ಈ ಉಪನಿಷತ್ತು ಸಹಕಾರಿಯಾಗಿದೆ. ಪರಮಾತ್ಮನ ಸ್ವರೂಪವನ್ನು ಹಲವು ಬಗೆಗಳಲ್ಲಿ ನಾವು ಕಾಣುವವರು. ಮತ್ತು ಮಂತ್ರ ತಂತ್ರ ಮುಖೇನ ಪೂಜಿಸುವವರು. ಮನುಷ್ಯನ ಪ್ರಾರ್ಥನೆಯೆಂದರೆ ಮುಖ್ಯವಾಗಿ ಇಷ್ಟಾರ್ಥ ಸಿದ್ಧಿ. ಇಂತಹ ಉಪನಿಷತ್ತುಗಳನ್ನು ದೇವರು ತೋರಿದದಾರಿ ಎಂದು ಪರಿಗಣಿಸಿ ಪಠಿಸಿದರೆ, ಆಲಿಸಿದರೆ ನಾವು ವಿಘ್ನರಹಿತವಾದ ಜೀವನ ನಡೆಸಬಹುದು.

ಓಂ ನಮೋ ವ್ರಾತಪತಯೇ ನಮೋ ಗಣಪತೆಯೇ ನಮಃ ಪ್ರಮಥಪತೆಯೇ ನಮಸ್ತೇಸ್ತು
ಲಂಬೋದರಾಯೈಕದಂತಾಯ ವಿಘ್ನನಾಶಿನೇ ಶಿವಸುತಾಯ ಶ್ರೀ ವರವರದಮೂರ್ತಯೇ ನಮಃ||

|| ಸರಳವಾಗಿ ಯೋಚಿಸಿ ಸಂಸ್ಕಾರಯುತರಾಗಿ ಸರಳರಾಗಿ ಜೀವಿಸಿ||

ವಿಷ್ಣು ಭಟ್, ಹೊಸ್ಮನೆ.(ಭಾಸ್ವ)

LEAVE A REPLY

Please enter your comment!
Please enter your name here