ಮಹಾನಗರ: ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಶುಕ್ರವಾರ ಶ್ರೀದೇವಿ ದೇವರಿಗೆ ಕಲಾಭಿಷೇಕ, ಪ್ರಸನ್ನಾ ಪೂಜೆ ಹಾಗೂ ದೇಗುಲದ ಪ್ರಾಂಗಣದಲ್ಲಿ ವೇ| ಮೂ| ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇಗುಲದ ಪ್ರಧಾನ ಅರ್ಚಕ ವೆಂಕಟರಮಣ ಆಸ್ರಣ್ಣರ ಪೌರೋಹಿತ್ಯದಲ್ಲಿ, ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹಾ ಚಂಡಿಕಾಯಾಗ ಸಂಪನ್ನಗೊಂಡಿತು.
ಸುಮಾರು ಹತ್ತು ಸಹಸ್ರದಷ್ಟು ಶೇಷ ವಸ್ತ್ರ ವಿತರಣೆ
ಕ್ಷೇತ್ರಕ್ಕೆ ಆಗಮಿಸಿದ ಎಲ್ಲ ಭಕ್ತರಿಗೂ ಶ್ರೀ ದೇವರ ಅನುಗ್ರಹ ಪ್ರಸಾದರೂಪದಲ್ಲಿ ಶ್ರೀ ದೇವರ ಶೇಷ ವಸ್ತ್ರ (ರವಿಕೆ ಕಣ) ಬಳೆ, ಹೂ ಹಾಗೂ ಕುಂಕುಮ ನೀಡಿ ಪ್ರಸಾದ ವಿತರಿಸಲಾಯಿತು. ಮಧ್ಯಾಹ್ನ ಸುಮಾರು ಹದಿನೈದು ಸಹಸ್ರಕ್ಕೂ ಮಿಕ್ಕಿ ಭಕ್ತರು ಶ್ರೀ ದೇವರ ಅನ್ನ ಪ್ರಸಾದ ಸ್ವೀಕರಿಸಿದರು.
ಭಕ್ತರಿಂದ ಪ್ರಸಾದ ಸ್ವೀಕಾರ
ಕ್ಷೇತ್ರಕ್ಕೆ ಆಗಮಿಸುವ ಎಲ್ಲ ಭಕ್ತರಿಗೂ ಬೆಳಗ್ಗೆ ಹಾಗೂ ಸಂಜೆ ಉಪಾಹಾರ ವ್ಯವಸ್ಥೆ ಹಾಗೂ ರಾತ್ರಿ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿದ್ದು, ಸಹಸ್ರಾರು ಭಕ್ತರು ಶ್ರೀದೇವರ ಪ್ರಸಾದ ಸ್ವೀಕರಿಸುತ್ತಿರುವರು.