ಕಡಬ : ಮರ್ದಾಳದ ನಡು ಮಜಲು ಶ್ರೀ ಮಹಾವಿಷ್ಣು ದೇವಸ್ಥಾನ, ಶ್ರೀ ಹೊಸಮ್ಮ ದೇವಿ, ಕೊಡಮಣಿತ್ತಾಯ ಮತ್ತು ವಿಷ್ಣುಮೂರ್ತಿ ದೈವಸ್ಥಾನದಲ್ಲಿ 10 ದಿನಗಳ ಕಾಲ ಜರಗಿದ ವರ್ಷಾವಧಿ ಜಾತ್ರೆಯು ಮಾ. 22ರಂದು ರಾತ್ರಿ ಭಕ್ತಿ ಸಂಭ್ರಮದಿಂದ ತೆರೆಕಂಡಿತು.
ಮಾ. 20ರಂದು ಸಂಜೆ ಬಿಳಿನೆಲೆ ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಯವರಿಂದ ಭಜನ ಕಾರ್ಯಕ್ರಮ ನಡೆಯಿತು. ರಾತ್ರಿ ಶ್ರೀ ಹೊಸಮ್ಮನವರ ಭಂಡಾರವೇರಿಸಿ 21ರಂದು ಬೆಳಗ್ಗೆ ನೇಮ ನಡೆಯಿತು. ಬಳಿಕ ಪ್ರಾರ್ಥನೆ, ಹರಕೆ ಸಲ್ಲಿಕೆ, ಪ್ರಸಾದ ವಿತರಣೆ ಜರಗಿತು. ಸಂಜೆ ಮರ್ದಾಳ ಶ್ರೀ ಮಹಾಲಿಂಗೇಶ್ವರ ಭಜನ ಮಂಡಳಿಯ ಸದಸ್ಯರಿಂದ ಭಜನೆ ನೆರವೇರಿತು. ಮಾ. 22ರ ಸಂಜೆ ಸುಂಕದಕಟ್ಟೆ ಶ್ರೀ ಚಾಮುಂಡೇಶ್ವರಿ ಭಜನ ಮಂಡಳಿಯ ಸದಸ್ಯರಿಂದ ಭಜನೆ ನೆರವೇರಿತು. ರಾತ್ರಿ ಬೇತಾಳಗೆ ನೇಮ, ಬಳಿಕ ಭಂಡಾರವೇರಿಸಿ ಧರ್ಮದೈವ ಕಲ್ಲುರ್ಟಿ, ಪಂಜುರ್ಲಿ, ಗುಳಿಗ ದೈವಗಳ, ಧರ್ಮದೈವ ಸ್ಥಳದ ಪಂಜುರ್ಲಿ, ಕಲ್ಲುರ್ಟಿ ದೈವದ ನೇಮ ನಡೆಯಿತು.
ದೇವಸ್ಥಾನದ ಆಡಳಿತದಾರರದ ಎನ್. ನಾರಾಯಣ ರೈ, ಎಸ್.ಎನ್. ಕುಸುಮಾವತಿ ರೈ, ಆಡಳಿತ ಮೊಕ್ತೇಸರ ಚಂದ್ರಶೇಖರ ರೈ, ಉತ್ಸವ ಸಮಿತಿ ಅಧ್ಯಕ್ಷ ಜಯಸೂರ್ಯ ರೈ ಮಾದೋಡಿ, ಶ್ಯಾಮ್ಸುಂದರ್ ರೈ ನಡುಮಜಲುಗುತ್ತು, ಸತ್ಯನಾರಾಯಣ ಹೆಗ್ಡೆ, ತುಮಕೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಸತೀಶ್ ಬಾಬಾ ರೈ ನಡುಮಜಲು, ಸಹಾಯಕ ಪೊಲೀಸ್ ಅಧೀಕ್ಷಕ ಪ್ರೇಮಸಾಯಿ ರೈ ನಡುಮಜಲು, ದೇವಸ್ಥಾನದ ಉತ್ಸವ ಸಮಿತಿ ಕಾರ್ಯದರ್ಶಿ ಕರುಣಾಕರ ರೈ, ವೇಣುಗೋಪಾಲ ರೈ ಬಡೆಕ್ಕೋಡಿ, ವಿಶ್ವನಾಥ ರೈ ಕರಿಂಬಿತ್ತಿಲ್ ಸೇರಿದಂತೆ ಆಡಳಿತ ಮಂಡಳಿ, ಉತ್ಸವ ಸಮಿತಿಯ ಪದಾಧಿಕಾರಿಗಳು, ಊರ ಪರವೂರ ಭಕ್ತರು ಉಪಸ್ಥಿತರಿದ್ದರು.