ಹಿರಿಯಡಕ: ಇಲ್ಲಿನ ಪುರಾಣ ಪ್ರಸಿದ್ಧ ವೀರಭದ್ರ ಸ್ವಾಮಿ ದೇವಸ್ಥಾನ 26 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡು ಬಳಿಕ ನಡೆದ ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವೈಭವದಿಂದ ಸಮಾಪನಗೊಂಡಿದೆ.
ಸುಮಾರು 800 ವರ್ಷಗಳ ಇತಿಹಾಸದ ಈ ಕ್ಷೇತ್ರದಲ್ಲಿ ಎ. 16ರಿಂದ ಎ. 25ರ ವರೆಗೆ ನವೀಕೃತ ದೇಗುಲ ಸಮರ್ಪಣೆ, ಪುನಃಪ್ರತಿಷ್ಠೆ, ಬ್ರಹ್ಮಕಲಶ ಕಾರ್ಯಕ್ರಮಗಳು ಅಪೂರ್ವವೆಂಬಂತೆ ನಡೆದಿವೆ.
ಧಾರ್ಮಿಕ ಕಾರ್ಯಕ್ರಮ
ಬ್ರಹ್ಮಕಲಶ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ವಿಶಿಷ್ಟ ಸಂಪ್ರದಾಯಗಳು ನಡೆದಿದ್ದು, ಜನರು ಭಕ್ತಿಭಾವದಿಂದ ಭಾಗಿ ಯಾಗಿದ್ದರು. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಷಡಂಗ ಬಿ. ಲಕ್ಷ್ಮೀನಾರಾಯಣ ತಂತ್ರಿ ಹಾಗೂ ಬ್ರಹ್ಮಶ್ರೀ ಬಿ.ಗುರುರಾಜ ತಂತ್ರಿಗಳ ನೇತೃತ್ವದಲ್ಲಿ ಅರ್ಚಕ ರಂಗನಾಥ ಭಟ್ ಅವರ ಪೌರೋಹಿತ್ಯದಲ್ಲಿ ಕಾರ್ಯಕ್ರಮಗಳು ನಡೆದಿದ್ದವು. ವಿವಿಧ ಕಲಶಾಭಿಷೇಕಗಳು, ಹೋಮಗಳು, ವೈದಿಕ ಕಾರ್ಯಕ್ರಮಗಳು ನಡೆದವು.
ಜನಸಾಗರ
10 ದಿನಗಳ ಕಾರ್ಯಕ್ರಮ ಸಂದರ್ಭ ಲಕ್ಷಕ್ಕೂ ಮಿಕ್ಕಿ ಭಕ್ತರು ದೇಗುಲಕ್ಕೆ ಭೇಟಿ ನೀಡಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆ. ಕೊನೆ ದಿನವೊಂದರಲ್ಲೇ 80 ಸಾವಿರಕ್ಕೂ ಮಿಕ್ಕಿ ಭಕ್ತರು ಆಗಮಿಸಿದ್ದಾರೆ. ಸಾವಿರಾರು ಸಂಖ್ಯೆಯ ಭಕ್ತರು ಆಗಮಿಸುತ್ತಿದ್ದರೂ ನೂಕು ನುಗ್ಗಲು ಆಗದಂತೆ, ದೇವರ ದರ್ಶನಕ್ಕೆ, ಪಾರ್ಕಿಂಗ್ ಸ್ಥಳ, ಇತರೆಡೆಗಳಲ್ಲಿ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು.
1.5 ಲಕ್ಷ ಮಂದಿಗೆ ಅನ್ನದಾನ
ಉತ್ಸವ ಸಂದರ್ಭ ಸುಮಾರು 1.5 ಲಕ್ಷ ಮಂದಿಗೆ ಅನ್ನದಾನ ಮತ್ತು ಉಪಾಹಾರ ವ್ಯವಸ್ಥೆಯನ್ನು 10 ದಿನಗಳಲ್ಲಿ ಮಾಡಲಾಗಿತ್ತು. ನಿತ್ಯ ಮಧ್ಯಾಹ್ನ, ಸಂಜೆ 20 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಕೊನೆಯ ದಿನವಾದ ರವಿವಾರ 60 ಸಾವಿರಕ್ಕೂ ಹೆಚ್ಚು ಮಂದಿ ಅನ್ನಪ್ರಸಾದ ಸೇವಿಸಿದರು.
ವಿಶಾಲ ಅನ್ನಸಂತರ್ಪಣಾ ಚಪ್ಪರ
ನೂಕುನುಗ್ಗಲನ್ನು ತಡೆಯಲು ಏಕಕಾಲದಲ್ಲಿ 3 ಸಾವಿರ ಜನರು ಕುಳಿತು ಊಟ ಮಾಡುವ ಟೇಬಲ್ ವ್ಯವಸ್ಥೆ ಹಾಗೂ 6 ಸಾವಿರ ಜನರಿಗಾಗುವಷ್ಟು ಬಫೆ ಕೌಂಟರ್ ಊಟದ ವ್ಯವಸ್ಥೆ ಅಲ್ಲದೆ ಸಭಾಂಗಣದಲ್ಲಿ 10 ಸಾವಿರ ಜನ ಏಕಕಾಲದಲ್ಲಿ ಊಟಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಇದಕ್ಕಾಗಿ 100ಕ್ಕೂ ಹೆಚ್ಚು ಬಾಣಸಿಗರು, ಸ್ವಯಂಸೇವಕರು ಶ್ರಮಿಸಿದ್ದರು.
ಶಿಲ್ಪ ಕಲೆಯ ದೇಗುಲ
ಇಡೀ ದೇಗುಲವನ್ನು ಕಲ್ಲು ಮತ್ತು ಮರಗಳಿಂದ ಮರು ರೂಪಿಸಲಾಗಿದ್ದು, ಅತ್ಯಾಕರ್ಷಕ ಕೆತ್ತನೆಗಳಿಂದ ಸುಂದರಗೊಳಿಸಲಾಗಿದೆ. ಬ್ರಹ್ಮಲಿಂಗೇಶ್ವರ ಗುಡಿ, ವೀರಭದ್ರ ಗರ್ಭ ಗುಡಿ. ಮುಖಮಂಟಪ, ರಾಜಗೋಪುರಗಳು ಹೊಯ್ಸಳ, ದ್ರಾವಿಡ ಶೈಲಿಯಲ್ಲಿವೆ. ಶಿಲ್ಪ ಕಲೆಯ ವೈವಿಧ್ಯಮಯ ಅಂಶಗಳನ್ನು ದೇಗುಲದಲ್ಲಿ ಕೆತ್ತಲಾಗಿದ್ದು ಅಪೂರ್ವದ್ದಾಗಿವೆ. ದೀಪದಳಿಯಲ್ಲಿ ಶಿವನ ನಾಟ್ಯಭಂಗಿಯಿದ್ದು ದೀಪದಳಿಯ ಮೇಲಿನ ಹಂತದಲ್ಲಿ ಹಿರಿಯಡಕ ಕ್ಷೇತ್ರದ ಇತಿಹಾಸವನ್ನು , ಕತೆಯನ್ನು , ಉತ್ಸವ ಮತ್ತು ಸಿರಿಜಾತ್ರೆಯ ದೃಶ್ಯಗಳನ್ನು ಮರದ ಹಲಗೆಗಳಲ್ಲಿ ಉಬ್ಬುಶಿಲ್ಪವಾಗಿ ಕೆತ್ತಿಸಲಾಗಿದೆ. ಗರ್ಭಗುಡಿಯ ದೀಪದಳಿಗೆ 460 ಕೆ.ಜಿ. ಬೆಳ್ಳಿ ಹೊದಿಕೆ ಹಾಕಲಾಗಿದೆ ಈ ಎಲ್ಲ ಕೆಲಸಗಳಿಗೆ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಶಿಲ್ಪಿಗಳೂ ಕೆಲಸ ಮಾಡಿದ್ದಾರೆ.
ಮನಗೆದ್ದ ಸಾಂಸ್ಕೃತಿಕ ವೈವಿಧ್ಯ
ಹಿರಿಯಡಕ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಬ್ರಹ್ಮಕಲಶೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿನನಿತ್ಯ ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೂರೆಗೊಂಡಿತು. ರವಿವಾರದಂದು ಪ್ರವೀಣ್ ಗೋಡ್ಕಿಂಡಿ ಮತ್ತು ಸನಾತನ ನಾಟ್ಯಾಲಯ ಮಂಗಳೂರು, ನೃತ್ಯ ನಿಕೇತನ ಕೊಡವೂರು, ವಸಂತ ನಾಟ್ಯಾಲಯ ಕುಂದಾಪುರ ಅವರಿಂದ ನೃತ್ಯ ಸಿಂಚನ ಕಾರ್ಯಕ್ರಮ ನಡೆಯಿತು. ಇದನ್ನು ಕಣ್ತುಂಬಿಕೊಳ್ಳಲು ಸಹಸ್ರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.