ಬದಿಯಡ್ಕ: ಗಾಡಿಗುಡ್ಡೆ ಶ್ರೀ ಭಾರತಾಂಬಾ ಬಾಲಗೋಕುಲ ಹಾಗೂ ಶ್ರೀ ಭಾರತಾಂಬಾ ಭಜನಾ ಮಂದಿರದ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ನೇತೃತ್ವದಲ್ಲಿ ಗಾಡಿಗುಡ್ಡೆ ಶ್ರೀ ಭಾರತಾಂಬಾ ಭಜನ ಮಂದಿರದಲ್ಲಿ ಶ್ರೀಕೃಷ್ಣ ಜನ್ಮೋತ್ಸವ ಬಹಳ ವಿಜೃಂಭಣೆಯಿಂದ ಜರಗಲಿರುವುದು.
ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ಗಾಡಿಗುಡ್ಡೆ ಭಾರತಿ ಸದನದಲ್ಲಿ ಜರಗಿತು.
ಹಿರಿಯ ಧಾರ್ಮಿಕ ರಾಜಕೀಯ ಮುಂದಾಳು, ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ನ ಅಧ್ಯಕ್ಷರಾದ ಎಂ. ಸಂಜೀವ ಶೆಟ್ಟಿಯವರು ಜನ್ಮಾಷ್ಟಮಿಯ ಪ್ರಚಾರ ಸಮಿತಿ ಸಂಚಾಲಕರಾದ ವಿನು ಅಡ್ಕ ಕಾನಕ್ಕೋಡುರವರಿಗೆ ನೀಡಿ ಬಿಡುಗಡೆಗೊಳಿಸಿದರು. ಜನ್ಮಾಷ್ಟಮಿ ಸಮಿತಿ ಅಧ್ಯಕ್ಷರಾದ ಎಂ. ಕುಮಾರನ್ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಗುರುಸ್ವಾಮಿಗಳಾದ ಶ್ರೀಧರ ಮಣಿಯಾಣಿ ಪೈಕ, ಜನಪ್ರತಿನಿಧಿಗಳಾದ ಯಶೋದಾ ಎನ್., ರೇಣುಕಾ ದೇವಿ., ಸ್ವಪ್ನಾ ಐ, ಜನ್ಮಾಷ್ಟಮಿ ಸಮಿತಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ರಾಜಗೋಪಾಲ ರೈ ಸ್ವಾಗತಿಸಿ, ಸಚಿನ್ ಜಿ ವಂದಿಸಿದರು.
ಜನ್ಮಾಷ್ಟಮಿ ಕಾರ್ಯಕ್ರಮದಂಗವಾಗಿ ಆಗಸ್ಟ್ 18 ರಂದು ಬೆಳಗ್ಗೆ 9ಕ್ಕೆ ಧ್ವಜಾರೋಹಣ, 9.30ರಿಂದ ಪುಟಾಣಿಗಳು, ಎಲ್.ಪಿ. -ಯು.ಪಿ- ಹೈಸ್ಕೂಲ್- ಸಾರ್ವಜನಿಕ ವಿಭಾಗ ಗಳಲ್ಲಾಗಿ ವಿವಿಧ ಭೌದ್ಧಿಕ ಹಾಗೂ ಆಟೋಟ ಸ್ಪರ್ಧೆಗಳು ನಡೆಯಲಿರುವುವು. ಆಗಸ್ಟ್ 23ರಂದು ಮಧ್ಯಾಹ್ನ 3 ಗಂಟೆಗೆ ಬೃಹತ್ ಶೋಭಾಯಾತ್ರೆಯೂ ನಡೆಯಲಿದೆ. ಶೋಭಾಯಾತ್ರೆಯು ಬೇಂಗತ್ತಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪರಿಸರದಿಂದ ಹೊರಟು ಸ್ತಬ್ಧಚಿತ್ರ, ತಾಲಪ್ಪೊಳಿ, ಚೆಂಡೆಮೇಳ, ಮುತ್ತುಕೊಡೆ, ಯಕ್ಷಗಾನ ವೇಷ, ವೇದಘೋಷ ವಾಕ್ಯಗಳೊಂದಿಗೆ ಶಿವನಗರ, ಸರ್ಪಂಗಳ ಅಮ್ಮ ನವರ ತರವಾಡು ಮನೆ ಪರಿಸರಕ್ಕೆ ಬಂದು ಗಾಡಿ ಗುಡ್ಡೆ ಶ್ರೀ ಭಾರತಾಂಬಾ ಭಜನ ಮಂದಿರದಲ್ಲಿ ಸಮಾಪ್ತಿಗೊಳ್ಳಲಿದೆ.
ಸಾಯಂಕಾಲ 7 ಗಂಟೆಗೆ ಶ್ರೀ ಭಾರತಾಂಬಾ ಭಜನ ಮಂದಿರದಲ್ಲಿ ಭಜನಾ ಕಾರ್ಯಕ್ರಮ ಜರಗಲಿದೆ. ರಾತ್ರಿ 10 ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ ನಡೆದು ಧ್ವಜಾರೋಹಣದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಳ್ಳಲಿದೆ.