ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಮಾ. 22 ರಂದು ಸಮರ್ಪಣೆಯಾಗಲಿರುವ ಹೊಸ ಪುಷ್ಪರಥವನ್ನು ಪುತ್ತೂರಿಗೆ ತರಲಾಗಿದೆ. ಮೂಡುಬಿದಿರೆಯ ಅಶ್ವತ್ಥಪುರದಲ್ಲಿ ನಿರ್ಮಾಣಗೊಂಡ ದೇವಾಲಯದ ಪುಷ್ಪರಥವನ್ನು ಶನಿವಾರ ಪುತ್ತೂರಿಗೆ ಲಾರಿಯ ಮೂಲಕ ತರಲಾಯಿತು. ಚಕ್ರದಿಂದ 12 ಅಡಿ ಎತ್ತರವಿರುವ ಹೂತೇರನ್ನು ದೇವಾಲಯದ ಹೊರಾಂಗಣದಲ್ಲಿ ಆರತಿ ಬೆಳಗಿ ಸ್ವಾಗತಿಸಲಾಯಿತು. ಪುಷ್ಪರಥವನ್ನು ರೂ. 22 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳಿಸಲಾಗಿದೆ.
ಮಾ. 22ರಂದು ಪುಷ್ಪರಥವನ್ನು ಶ್ರೀ ದೇವರಿಗೆ ಸಮರ್ಪಣೆ ಮಾಡಲಾಗುವುದು. ಈ ಪುಷ್ಪರಥವನ್ನು ವರ್ಷದಲ್ಲಿ ಒಂದು ದಿನ ವಾರ್ಷಿಕ ಜಾತ್ರೆಯ ಸಂದರ್ಭ ಎ. 16 ರಂದು ಶ್ರೀ ದೇವಾಲಯದ ಹೊರಾಂಗಣದಲ್ಲಿ ಎಳೆಯಲಾಗುತ್ತದೆ.
ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಎನ್.ಸುಧಾಕರ ಶೆಟ್ಟಿ, ಸದಸ್ಯರಾದ ಜಾನು ನಾಯ್ಕ, ಯು.ಪಿ. ರಾಮಕೃಷ್ಣ, ಸಂಜೀವ ನಾಯಕ್, ರೋಹಿಣಿ ಆಚಾರ್ಯ, ನಯನಾ ರೈ, ವಸಂತ ಕೆದಿಲಾಯ, ವಾಸ್ತು ಎಂಜಿನಿಯರ್ ಪಿ. ಜಿ. ಜಗನ್ನಿವಾಸ್ ರಾವ್, ರಾಮಚಂದ್ರ ಘಾಟೆ ಮೊದಲಾದವರು ಉಪಸ್ಥಿತರಿದ್ದರು.