ಕಟಪಾಡಿ: ಕುಂಜಾರು ಗಿರಿಯಲ್ಲಿರುವ 32 ಅಡಿ ಎತ್ತರದ ಆಚಾರ್ಯ ಮಧ್ವರ ವಿಗ್ರಹ ಪ್ರತಿಷ್ಠಾ ವರ್ಧಂತಿ ಇತ್ತೀಚೆಗೆ ನಡೆಯಿತು. ಅದಮಾರು ಮಠಾಧೀಶರು ಕಲಶಾಭಿಷೇಕ ಮಾಡಿ ಪೂಜೆ ನೆರವೇರಿಸಿದರು.
ಅನಂತರ ನಡೆದ ಧಾರ್ಮಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಅದಮಾರು ಮಠದ ಹಿರಿಯ ಮಠಾಧೀಶ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಶಿಷ್ಯರು ಸಂದೇಹವನ್ನು ಯಾವುದೇ ಸಮಯದಲ್ಲಿ ಪ್ರಶ್ನಿಸಿದಾಗ ತತ್ಕ್ಷಣ ಪರಿಹಾರ ಮಾಡುವವರೇ ನಿಜವಾದ ಗುರುಗಳು. ಆಚಾರ್ಯ ಮಧ್ವರು ವೇದ ಪುರಾಣಗಳಲ್ಲಿ ಬರುವ ಯಾವುದೇ ಜಟಿಲ ಸಂಶಯ ಬಂದಾಗ ಅದಕ್ಕೆ ನಿರ್ದಿಷ್ಟ ಅರ್ಥವನ್ನು ಸಮಾಜಕ್ಕೆ ತಿಳಿಸಿ ಸಂದೇಹ ನಿವಾರಿಸಿ ಜಗದ್ಗುರುಗಳಾಗಿದ್ದಾರೆ ಎಂದರು.
ಪ್ರಯಾಗ ಮಠಾಧೀಶ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ವಿದ್ವಾನ್ ಅಚ್ಚಡ ಶ್ರೀನಿವಾಸ ಆಚಾರ್ಯ ಹಾಗೂ ಮುದರಂಗಡಿ ಶ್ರೀಶ ಆಚಾರ್ಯರಿಂದ ಉಪನ್ಯಾಸ ನಡೆದವು. ಪಲಿಮಾರು ಮಠದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯಾಯರು ನಿರೂಪಿಸಿದರು.ವಿವಿಧ ಭಜನ ಮಂಡಳಿಗಳಿಂದ ಭಜನೆ ನಡೆಯಿತು.