“ನಾನು ಇಂದಿನಿಂದ ಯಾರ ಜೊತೆಗೂ ಕಲಹ ಮಾಡುವುದಿಲ್ಲ” ಎಂಬ ಪ್ರತಿಜ್ಞೆಯನ್ನು ನಾವು ಮಾಡಿಬಿಡುವುದು ತುಂಬಾ ಸುಲಭ. ಆದರೆ ಇದನ್ನು ಪಾಲಿಸುವುದು ಎಂದಿಗೂ ಸುಲಭವಲ್ಲ. ಮೌನದಿಂದಿರುತ್ತೇನೆ, ಆಗ ಕಲಹಕ್ಕೆ ಅವಕಾಶವೇ ಇರುವುದಿಲ್ಲ ಎಂಬ ನಿರ್ಧಾರಕ್ಕೆ ಬಂದರೂ ಜನರ ಮಧ್ಯದಲ್ಲಿ ಮೌನವಾಗಿರುವುದೂ ಕಲಹಕ್ಕೆ ಕಾರಣವಾಗುತ್ತದೆ. ಸಹಬಾಳ್ವೆ ಎಂಬುದು ದೇವರಿಂದಲೇ ನಿರ್ಮಿತವಾದುದು. ಪ್ರಕೃತಿಯ ನಿಯಮವೇ ಕ್ರಿಯೆ-ಪ್ರತಿಕ್ರಿಯೆಗಳನ್ನು ಪ್ರತಿಬಿಂಬಿಸುತ್ತಿರುವಾಗ ನಾವು ಮಾತನಾಡದೇ ಇದ್ದರೂ ಕೇಳಿದ್ದಕ್ಕಾದರೂ ಉತ್ತರ ಕೊಡಲೇ ಬೇಕು. ಆದರೂ ನಾವು ಬಯಸುವುದು ಶಾಂತಿಯುತವಾದ ಬದುಕು. ಕಲಹ, ದ್ವೇಷಗಳು ನಮಗೆ ಬೇಕಿಲ್ಲ. ಇವುಗಳಿಂದ ಸಾಧಿಸುವಂತದ್ದೂ ಏನಿಲ್ಲ. ಆದರೂ ಕೂಡ ಜಗತ್ತಿನ ಅಶಾಂತಿಗೆ ಮೂಲವೇ ಈ ಕಲಹ. ಕಲಹಕ್ಕೆ ಮೂಲ ಕಾರಣ ಹೆಣ್ಣು, ಹೊನ್ನು ಮತ್ತು ಮಣ್ಣು ಎಂಬ ಮಾತಿದೆ. ಇದು ಹೊರಗಿನಿಂದಷ್ಟೇ ಸತ್ಯ. ಯಾಕೆಂದರೆ ಕಲಹದಿಂದಲೇ ಹೆಣ್ಣನ್ನೋ ಮಣ್ಣನ್ನೋ ಹೊನ್ನನ್ನೋ ಪಡೆದವನಿಗೂ ಕೊನೆಯಲ್ಲಿ ‘ಇಷ್ಟಕ್ಕಾಗಿಯೇ ನಾನು ಕಲಹದಲ್ಲಿ ಕಾಲಹರಣ ಮಾಡಿದೆನಾ?’ ಎಂದು ಅನ್ನಿಸುತ್ತದೆ. ಕೊನೆಗೂ ಅವನಿಗೆ ತೃಪ್ತಿಯಿಲ್ಲ. ನಿಜಕ್ಕೂ ತೃಪ್ತಿ ಯಾವುದು? ಅದೂ ಗೊತ್ತಿಲ್ಲ! ಎಲ್ಲವೂ ಕ್ಷಣಿಕವಾಗಿರುವಾಗ ಕಲಹ ಮಾತ್ರ ಶಾಶ್ವತವಾದ ಶಾಂತಿಯನ್ನು ಕೆಡಿಸಿಬಿಡುತ್ತದೆ. ಇದರಿಂದ ಹೊರಬರುವುದು ಹೇಗೆ?
ಶ್ರೀಮದ್ಭಾಗವತದ ಅವಧೂತೋಪಾಖ್ಯಾನದಲ್ಲಿ ಕಲಹವಿಲ್ಲದೆ ಬದುಕುವ ಬಗೆಯನ್ನು ಹೇಳಲಾಗಿದೆ. ಅವಧೂತರು ಇಲ್ಲೊಂದು ಕುಮಾರಿಯ ಕಥೆಯನ್ನು ಹೇಳುತ್ತಾರೆ. ‘ಕುಮಾರಿಯೊಬ್ಬಳೇ ಮನೆಯಲ್ಲಿರುವಾಗ ಅತಿಥಿಗಳು ಬರುತ್ತಾರೆ. ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಆಕೆ ಅವರ ಭೋಜನಕ್ಕಾಗಿ ಏಕಾಂತದಲ್ಲಿ ಭತ್ತವನ್ನು ಕುಟ್ಟುತ್ತಿದ್ದಳು. ಭತ್ತವನ್ನು ಕುಟ್ಟುವಾಗ ಅವಳ ಕೈಬಳೆಗಳು ಸದ್ದು ಮಾಡತೊಡಗಿದವು. ಈ ಶಬ್ದವನ್ನು ನಿಂದಿತವೆಂದು ಭಾವಿಸಿದ ಹುಡುಗಿ, ಎಲ್ಲಾ ಬಳೆಗಳನ್ನು ತೆಗೆದಿಟ್ಟು, ಎರಡು ಬಳೆಗಳನ್ನು ಮಾತ್ರ ಉಳಿಸಿಕೊಂಡು ಭತ್ತ ಕುಟ್ಟಲು ಆರಂಭಿಸಿದಳು. ಆ ಎರಡು ಬಳೆಗಳೂ ಶಬ್ದಮಾಡಲು ತೊಡಗಿದಾಗ ಮತ್ತೆ ಒಂದನ್ನು ತೆಗದಿಟ್ಟು ತನ್ನ ಕೆಲಸ ಮುಂದುವರಿಸುತ್ತಾಳೆ. ಆಗ ಯಾವ ಸದ್ದೂ ಉಂಟಾಗಲಿಲ್ಲ. ಇಲ್ಲೊಂದು ಪಾಠವಿದೆ. ಅನೇಕ ಜನರು ಒಂದೆಡೆ ಇದ್ದರೆ ಕಲಹ ಉಂಟಾಗುತ್ತದೆ. ಇಬ್ಬರು ಜೊತೆಯಲ್ಲಿದ್ದರೂ ವ್ಯರ್ಥವಾದ ಮಾತುಗಳು ನಡೆಯುತ್ತವೆ. ಅದಕ್ಕಾಗಿ ಆ ಹೆಣ್ಣುಮಗಳ ಒಂದೇ ಒಂದು ಬಳೆಯಂತೆ ಒಬ್ಬನೇ ಸಂಚರಿಸಬೇಕು’ ಇದನ್ನು ನಾನು ಕಲಿತೆ, ಇದು ಕಲಹ ನಿವಾರಣೆಗೆ ಸುಲಭ ಮಾರ್ಗ ಎನ್ನುತ್ತಾರೆ.
ಎಷ್ಟು ಚಂದದ ಪಾಠ ನೋಡಿ. ಇದನ್ನೇ ನಮ್ಮ ಇವತ್ತಿನ ಬದುಕಿಗೆ ಅಳವಡಿಸಿ ನೋಡುವ. ಸಂಸಾರಿ ನಾಲ್ಕು ಜನರ ನಡುವೆಯೇ ಬದುಕ ಬೇಕಾದ ಅನಿವಾರ್ಯ ಇರುವುದರಿಂದ ಏಕಾಂಗಿಯಾಗಿ ಹೊರಟುಬಿಡಲು ಸಾಧ್ಯವಿಲ್ಲ. ಆದರೆ ಕಲಹವಾಗವ ಜಾಗವನ್ನು ಬಿಟ್ಟು ದೂರ ಹೋಗಬಹುದು. ಯಾವುದು ಕಲಹಕ್ಕೆ ಕಾರಣವಾಗುವುದೋ ಅಂತಹ ಸಂಗತಿಗಳನ್ನು ಅಲ್ಲಿಗೇ ಬಿಟ್ಟು ಬಿಡಬೇಕು. ಇನ್ನೂ ಒಂದು ಒಳಾರ್ಥ ಇಲ್ಲಿದೆ. ಯಾವುದು ಸುಖಾಸುಮ್ಮನೆ ಶಬ್ದ ಅಂದರೆ ಕಲಹಕ್ಕೆ ಕಾರಣವಾಗುವುದೋ ಅವನ್ನು ಗಮನಿಸಬೇಕು. ಈ ಕಥೆಯಲ್ಲಿ ಆ ಕುಮಾರಿ ಮಾಡಿದಂತೆ. ಅಲ್ಲಿ ಭತ್ತ ಕುಟ್ಟುವ ಸದ್ದೂ ಇತ್ತು; ಬಳೆಗಳ ಶಬ್ದವೂ ಇತ್ತು. ಆದರೆ ಬಳೆಗಳು ಸದ್ದು ಅಗತ್ಯವಿಲ್ಲದ್ದು. ಅದನ್ನು ಆ ಕುಮಾರಿ ಹೇಗೆ ನಿವಾರಿಸಬೇಕೆಂಬುದನ್ನು ಅರಿತುಕೊಂಡು ಕಾರ್ಯಗತಳಾದಳು. ಅಂತೆಯೇ ಕೇವಲ ಮಾತು-ನಡೆಗಳು ಜಗಳಕ್ಕೆ ಕಾರಣವಾಗುವುದಿಲ್ಲ, ಯಾವುದು ಕಲಹಕ್ಕೆ ಕಾರಣವಾಗುವುದೋ ಅದು ಕೇವಲ ಮಾತಾಗಿ ಉಳಿದಿರುವುದಿಲ್ಲ. ಎಷ್ಟು ಅಗತ್ಯವೋ ಅಷ್ಟನ್ನೇ ಪ್ರೀತಿಯಿಂದ ಮನಕ್ಕೊಪ್ಪುವಂತೆ ಹೇಳುವ ಜಾಣ್ಮೆಯನ್ನು ಮತ್ತು ಬದುಕಿಗೆ ಎಷ್ಟು ಅಗತ್ಯವೋ ಅಷ್ಟನ್ನೇ ಹೊಂದಿಸಿಕೊಳ್ಳುವ ಬುದ್ಧಿವಂತಿಕೆಯನ್ನು ಬೆಳೆಸಿಕೊಳ್ಳಲು ಈ ಪಾಠ ಮಾದರಿ. ಹೇಳುವ ಕಲೆಯೊಂದೇ ಅಲ್ಲ, ಕೇಳುವ ಕಲೆಯನ್ನೂ ಅರಿತಿರಬೇಕು; ಬದುಕು ಬಂಗಾರವಾಗಲು.
||ಸರಳವಾಗಿ ಯೋಚಿಸಿ-ಸಂಸ್ಕಾರಯುತರಾಗಿ-ಸರಳರಾಗಿ ಜೀವಿಸಿ||
– ಭಾಸ್ವ.